ಮೂಡುಬಿದಿರೆ: ಇಲ್ಲಿನ ವರ್ಧಮಾನ ಪ್ರಶಸ್ತಿ ಪೀಠವು 2020ರ ಸಾಲಿನ ಪ್ರಶಸ್ತಿ ಪ್ರಕಟಿಸಿದ್ದು, ಧಾರವಾಡದ ಡಾ.ಜಿ.ಎಂ.ಹೆಗಡೆ ಅವರಿಗೆ ‘ವರ್ಧಮಾನ ಸಾಹಿತ್ಯ ಪ್ರಶಸ್ತಿ’ ಮತ್ತು ಮೈಸೂರಿನ ಡಾ. ಜ್ಯೋತಿ ಶಂಕರ್ ಅವರಿಗೆ ‘ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ’ಯನ್ನು ಘೋಷಿಸಿದೆ.
ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ತೀರ್ಪುಗಾರರು ಈ ಆಯ್ಕೆ ಮಾಡಿದ್ದಾರೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ.ಮೊಗಸಾಲೆ ತಿಳಿಸಿದ್ದಾರೆ.
ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ₹25 ಸಾವಿರ ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಗೆ ₹15 ಸಾವಿರ ಗೌರವ ಸಂಭಾವನೆ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ದಸರಾ ಉತ್ಸವ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿ ಎಂದು ಹೇಳಿದ್ದಾರೆ.