ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯದ ದಿನಗೂಲಿ ನೌಕರರಿಗೆ ₹ 5 ಲಕ್ಷ ಪರಿಹಾರ: ಮುಂದುವರಿದ ಪರಿಹಾರ ತಾರತಮ್ಯ

ನಾಳೆ ಅರಣ್ಯ ಹುತಾತ್ಮರ ದಿನ
Last Updated 9 ಸೆಪ್ಟೆಂಬರ್ 2021, 21:53 IST
ಅಕ್ಷರ ಗಾತ್ರ

ಮೈಸೂರು: ಕಾಯಂ ನೌಕರರು ಹುತಾತ್ಮರಾದರೆ ₹ 30 ಲಕ್ಷ ಪರಿಹಾರ ಕೊಡುವ ಅರಣ್ಯ ಇಲಾಖೆಯು ದಿನಗೂಲಿ ನೌಕರರಿಗೆ ಕೇವಲ ₹ 5 ಲಕ್ಷ ಪರಿಹಾರ ನೀಡುತ್ತಿದೆ. ಈ ತಾರತಮ್ಯ ನೀತಿಯ ವಿರುದ್ಧ ದಿನಗೂಲಿ ನೌಕರರ ಪ್ರತಿಭಟನೆಯು ‘ಅರಣ್ಯ ರೋದನ’ವಾಗಿಯೇ ಉಳಿದಿದೆ.

ದಟ್ಟ ಅರಣ್ಯದ ಮಧ್ಯೆ ಇರುವ ರಕ್ಷಣಾ ಶಿಬಿರ, ತನಿಖಾ ಠಾಣೆ, ಬೇಟೆತಡೆ ಶಿಬಿರ, ವನ್ಯಜೀವಿ ಹತ್ಯೆ ತಡೆ ಶಿಬಿರಗಳಲ್ಲಿ ದಿನಗೂಲಿ ನೌಕರರು ದಿನ 24 ಗಂಟೆ ಕೆಲಸ ಮಾಡುತ್ತಾರೆ. ಹೆಚ್ಚಿನ ಪ್ರಾಣಾಪಾಯದ ಸನ್ನಿವೇಶಗಳನ್ನು ಎದುರಿಸುತ್ತಾರೆ. ಆದರೆ, ಕಾಯಂ ನೌಕರರಿಗಿಂತ ಹಲವು ಪಟ್ಟು ಕಡಿಮೆ ವೇತನ ಮತ್ತು ಪರಿಹಾರ ಪಡೆಯುತ್ತಿದ್ದಾರೆ.

‘ಸುಮಾರು 2 ಸಾವಿರ ದಿನಗೂಲಿ ನೌಕರರು ಇಲಾಖೆಯಲ್ಲಿ ದುಡಿಯುತ್ತಿದ್ದಾರೆ. ದಿನಗೂಲಿ ನೌಕರರೋ ಅಥವಾ ಕಾಯಂ ನೌಕರರೋ ಎಂದು ತಿಳಿದು ವನ್ಯಜೀವಿಗಳು ಅಥವಾ ಬೇಟೆಗಾರರು ದಾಳಿ ನಡೆಸುವುದಿಲ್ಲ. ಆದರೆ ಪರಿಹಾರದಲ್ಲಿ ಮಾತ್ರ ಇಲಾಖೆ ತಾರತಮ್ಯ ಎಸಗುತ್ತಿದೆ’ ಎಂದು ರಾಜ್ಯ ಅರಣ್ಯ ಇಲಾಖೆ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದ ಅಧ್ಯಕ್ಷ ಎ.ಎಂ.ನಾಗರಾಜು ಅಸಮಾಧಾನ ತೋಡಿಕೊಂಡರು.

‘ವಿಶೇಷವೆಂದು ಪರಿಗಣಿಸಿ ದಿನಗೂಲಿ ನೌಕರರ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಿದ ಒಂದೆರಡು ನಿದರ್ಶನಗಳಿವೆ. ಎಲ್ಲ ಹುತಾತ್ಮ ದಿನಗೂಲಿ ನೌಕರರನ್ನು ವಿಶೇಷ ಎಂದೇ ಪರಿಗಣಿಸಿ, ಕಾಯಂ ನೌಕರರಿಗೆ ನೀಡುವಷ್ಟೇ ಪರಿಹಾರ ಕೊಡಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ದಿನಗೂಲಿ ನೌಕರರೊಬ್ಬರು ತಿಳಿಸಿದರು.

‘ದಿನಗೂಲಿ ನೌಕರರು ಇಲಾಖೆಯ ನೌಕರರಲ್ಲ. ಅವರು ಹುತಾತ್ಮರಾದರೆ, ಕಾಯಂ ನೌಕರರಿಗೆ ನೀಡುವಷ್ಟೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ವಿಶೇಷ ಪ್ರಕರಣ ಎಂದು ಶಿಫಾರಸು ಮಾಡಿದರೂ ಹಣಕಾಸು ಇಲಾಖೆ ಸುಲಭವಾಗಿ ಒಪ್ಪುವುದಿಲ್ಲ. ಹೀಗಾಗಿ ಮಾನವೀಯ ನೆಲೆಯಲ್ಲಿ ಮಾತ್ರ ಅವರ ಕುಟುಂಬದವರಿಗೆ ಪರಿಹಾರವನ್ನು ನೀಡಬಹುದಷ್ಟೇ’ ಎಂದು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿಜಯಕುಮಾರ್ ಗೋಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅರಣ್ಯ ಹುತಾತ್ಮರ ದಿನದ ಮಹತ್ವ

ಜೋಧಪುರದ ಮಹಾರಾಜ ಅಭಯಸಿಂಗ್‌ನ ಅರಮನೆಗಾಗಿ 1730ರ ಸೆ.11ರಂದು ಕೆಜರ್ಲಿ ಪ್ರಾಂತ್ಯದ ಮರಗಳನ್ನು ಕಡಿಯಲು ವಿರೋಧ ವ್ಯಕ್ತಪ‍ಡಿಸಿದ ಬಿಷ್ಣೋಯಿ ಸಮುದಾಯದ 363 ಮಂದಿಯನ್ನು ಸೈನಿಕರು ಕೊಂದರು. ಮರಗಳಿಗಾಗಿ ಬಲಿದಾನ ಮಾಡಿದವರ ನೆನಪಿಗೆ ಸೆ. 11ರಂದು ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತದೆ.

ರಾಜ್ಯದಲ್ಲಿ 53 ಹುತಾತ್ಮರು

ಕಾಡು ಮತ್ತು ಕಾಡುಪ್ರಾಣಿಗಳ ರಕ್ಷಣೆಯಲ್ಲಿ ಜೀವ ಕಳೆದುಕೊಂಡ ರಾಜ್ಯದ 53 ಮಂದಿಯನ್ನು ಹುತಾತ್ಮರು ಎಂದು ಪರಿಗಣಿಸಲಾಗಿದೆ.

ನಾಗರಹೊಳೆ ಹುಲಿ ರಕ್ಷಿತಾರಣ್ಯದ ನಿರ್ದೇಶಕರಾಗಿದ್ದ ಮಣಿಕಂದನ್‌ 2018ರಲ್ಲಿ ಕಾಡಿನೊಳಗೆ ಹುತಾತ್ಮರಾದರು. ಎಚ್‌.ಡಿ.ಕೋಟೆ ತಾಲ್ಲೂಕು ಡಿ.ಬಿ.ಕುಪ್ಪೆ ಅರಣ್ಯ ವಲಯದ ಕುತ್ತುನಾಳಕೊಲ್ಲಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕಾಳ್ಗಿಚ್ಚು ನಂದಿಸಲು ಸಿಬ್ಬಂದಿ ‘ಫೈರ್‌ಲೈನ್‌’ ಕೆಲಸ ಮಾಡುತ್ತಿದ್ದುದ್ದನ್ನು ಖುದ್ದು ಪರಿಶೀಲಿಸಲು ತೆರಳಿದ್ದ ವೇಳೆ ಆನೆ ದಾಳಿ ನಡೆಸಿತ್ತು. ಘಟನೆ ಇಡೀ ದೇಶದ ಗಮನ ಸೆಳೆದಿತ್ತು.

2017ರ ಫೆಬ್ರುವರಿಯಲ್ಲಿ ಬಂಡೀಪುರದಲ್ಲಿ ಕಾಳ್ಗಿಚ್ಚು ನಂದಿಸಲು ಹೋಗಿ ಅರಣ್ಯ ರಕ್ಷಕ ಮುರುಗೆಪ್ಪ ತಮ್ಮನಗೊಳ್ ಉಸಿರುಗಟ್ಟಿ ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT