ಬೆಂಗಳೂರು: ‘ಕೋವಿಡ್ ನಿಯಂತ್ರಣಕ್ಕಾಗಿ ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಪಡೆ ರಚಿಸಲಾಗುತ್ತದೆ. ಈ ಸಮಿತಿಯು ವೈದ್ಯಕೀಯ ಹಾಗೂ ಇತರ ಮೂಲಸೌಕರ್ಯ ಬಲಪಡಿಸುವ ಕೆಲಸ ಮಾಡಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಶನಿವಾರ ತಿಳಿಸಿದರು.
ಸಿಐಐ ಪ್ರತಿನಿಧಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು ‘ಆರೋಗ್ಯ ವಲಯದಲ್ಲಿ ತಂತ್ರಜ್ಞಾನ ಬಳಕೆ, ಔಷಧಿಗಳ ಪೂರೈಕೆ, ವೈದ್ಯಕೀಯ ಸಾಧನ ಮತ್ತು ಉಪಕರಣಗಳ ಪೂರೈಕೆ ಸೇರಿದಂತೆ ಹಲವು ಕಾರ್ಯಗಳಲ್ಲಿ ಕಾರ್ಯಪಡೆ,ರಾಜ್ಯ ಸರ್ಕಾರಕ್ಕೆ ನೆರವು ನೀಡಲಿದೆ’ ಎಂದರು.
‘ಕೋವಿಡ್ ನಿರ್ವಹಿಸಲು ಈಗಾಗಲೇ ಕೆಲ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಅವುಗಳಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಬೃಹತ್ ಕಾಲ್ಸೆಂಟರ್ ಆರಂಭಿಸಿ, ಎಲ್ಲಾ ಸಹಾಯವಾಣಿಗಳನ್ನು ಅದರಲ್ಲಿ ಸಮನ್ವಯಗೊಳಿಸಲು ಚಿಂತಿಸಲಾಗಿದೆ. ಈ ಕಾರ್ಯವನ್ನು ಟಾಸ್ಕ್ ಫೋರ್ಸ್ಗೆ ವಹಿಸಲಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರು ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ 3 ರಿಂದ 5 ಸಾವಿರ ಮಾಡ್ಯೂಲರ್ ಐಸಿಯು ಹಾಸಿಗೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 10 ದಿನಗಳೊಳಗೆ ಈ ಬಗೆಯ ಐಸಿಯು ರೂಪಿಸುವುದಾಗಿ ಕೆಲ ಕಂಪನಿಗಳು ತಿಳಿಸಿವೆ. ಎಲ್ಲಾ ಕಂಪನಿಗಳು ಸಿಎಸ್ಆರ್ ಅನುದಾನವನ್ನು ಕೊರೊನಾ ನಿಯಂತ್ರಣಕ್ಕೆ ನೀಡಬೇಕು. ರೆಮ್ಡಿಸಿವಿರ್ ಸೇರಿದಂತೆ ಇತರ ಔಷಧಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ನೆರವಾಗಬೇಕು’ ಎಂದು ಮನವಿ ಮಾಡಿದರು.
ಸಿಐಐ ಮಾಜಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ವಿಕ್ರಮ್ ಕಿರ್ಲೋಸ್ಕರ್, ಡಾ.ದೇವಿಶೆಟ್ಟಿ ಇದ್ದರು.