ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತನಗೌಡರ್ ನಿಧನದಿಂದ ನ್ಯಾಯಾಂಗಕ್ಕೆ ದೊಡ್ಡ ನಷ್ಟವಾಗಿದೆ: ಸಿಜೆಐ ರಮಣ

ನುಡಿನಮನ
Last Updated 18 ಸೆಪ್ಟೆಂಬರ್ 2021, 8:37 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯಮೂರ್ತಿ ದಿವಂಗತ ಮೋಹನ ಎಂ. ಶಾಂತನಗೌಡರ್ ಅವರನ್ನು ಅವರನ್ನು ಕಳೆದುಕೊಂಡು ನ್ಯಾಯಾಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಸಾಮಾನ್ಯ ಹಾಗೂ ಸರಳ ನಡತೆ ಎಲ್ಲರನ್ನು ಆಕರ್ಷಿಸುತ್ತಿತ್ತು’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ರಾಜ್ಯ ವಕೀಲರ ಪರಿಷತ್ತು ಶನಿವಾರ ಏರ್ಪಡಿಸಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದಿವಂಗತ ಮೋಹನ ಎಂ. ಶಾಂತನಗೌಡರ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಂತನಗೌಡರ್ ಅವರು ಬೆಳೆದು ಬಂದ ಹಾದಿಯನ್ನು ಸ್ಮರಿಸಿದ ಸಿಜೆಐ, ‘ಒಮ್ಮೆ ನನ್ನ ಉಂಗುರದಲ್ಲಿದ್ದ ಕಲ್ಲು ಕಳೆದುಹೋಗಿತ್ತು. ಅದನ್ನು ಹುಡುಕಲುಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಕೊನೆ ಅವರೇ ಅದನ್ನು ಹುಡುಕಿ ಕೊಟ್ಟಿದ್ದರು. ಅದು ಸಿಕ್ಕಿದ್ದರಿಂದ ಮತ್ತೆ ನಾನು ನನ್ನ ಉಂಗುರಕ್ಕೆ ಹಾಕಿಕೊಂಡಿದ್ದೇನೆ’ ಎಂದು ನೆನಪು ಮೆಲುಕು ಹಾಕಿದರು.

ಮಂಕುತಿಮ್ಮನ ಕಗ್ಗ ಹಾಡಿದ ಸಿಜೆಐ, ‘ಮೋಹನ ಎಂ. ಶಾಂತನಗೌಡರ್ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಶಾಂತಿ ಸಿಗಲಿ, ನೋವು ಬರಿಸುವ ಶಕ್ತಿ ನೀಡಲಿ’ ಎಂದೂ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಮೋಹನ ಶಾಂತನಗೌಡರ್ ಅವರಿಗೆ ಶ್ರದ್ಧಾಂಜಲಿ ಸಮಾರಂಭ ಮಾಡುತ್ತೇವೆ ಎಂದು ನಾನು ಅಂದುಕೊಂಡಿರಲಿಲ್ಲ. ಅವರು ಜೀವಂತವಿರುವ ವ್ಯಕ್ತಿತ್ವ, ನಾನೊಬ್ಬ ಜಸ್ಟೀಸ್‌ ಎಂದು ಅವರು ಎಂದಿಗೂ ತೋರಿಸಿಕೊಳ್ಳುತ್ತಿರಲಿಲ್ಲ’ ಎಂದರು.

‘ಶಾಲಾ ಕಾಲೇಜಿನ ದಿನಗಳಿಂದಲೂ ನಾನು ಅವರನ್ನು ಬಲ್ಲೆ. ನಮ್ಮ ತಂದೆ, ಅವರ ತಂದೆ ಸ್ನೇಹಿತರು. ಅವರು ದೊಡ್ಡ ಹುದ್ದೆಗೆ ತಲುಪಿದರೂ ಅವರ ವ್ಯಕ್ತಿತ್ವದಲ್ಲಿ ಎಂದಿಗೂ ಬದಲಾವಣೆ ಆಗಿರಲಿಲ್ಲ. ಅವರ ಸರಳತೆ ಎಲ್ಲರಿಗೂ ಮಾದರಿ. ಅವರಿಂದ ಕಲಿಯಬೇಕಾದ್ದು ಬಹಳಷ್ಟಿತ್ತು, ಅವರು ಸಾಮಾನ್ಯ ಜನರ ಜಡ್ಜ್. ಅವರ ಆದೇಶಗಳು ನ್ಯಾಯದ ಪರವಾಗಿ, ಸಾಮಾನ್ಯ ಜನರ ಪರವಾಗಿ ಇರುತ್ತಿತ್ತು’ ಎಂದೂ ಹೇಳಿದರು.

‘ಒಮ್ಮೆ ದೆಹಲಿಗೆ ಹೋದಾಗ ಅವರ ಮನೆಯಲ್ಲಿ ನನಗೆ ಜೋಳದ ರೊಟ್ಟಿ ಊಟ ಬಡಿಸಿದ್ದರು. ಅವರು ಹೃದಯದಿಂದ ಕನ್ನಡಿಗನಾಗಿದ್ದರು. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಅವರ ಕೆಲಸದಿಂದ ಅವರು ಶಾಶ್ವತವಾಗಿ ಉಳಿಯುತ್ತಾರೆ’ ಎಂದೂ ಹೇಳಿದರು.

‘ಕರ್ನಾಟಕ ಬಾರ್ ಅಸೋಸಿಯೇಷನ್ ಸಾಕಷ್ಟು ನ್ಯಾಯಮೂರ್ತಿಗಳನ್ನು ದೇಶಕ್ಕೆ ಕೊಟ್ಟಿದೆ. ಅದರಲ್ಲಿ ಮೋಹನ ಶಾಂತನಗೌಡರ್ ಕೂಡಾ ಒಬ್ಬರು. ಸಾಧಕನಿಗೆ ಸಾವು ಅಂತ್ಯವಲ್ಲ. ಅವರು ಸಾವು ಮೀರಿದವರು. ಅವರ ಸಾಧನೆ ಜೀವಂತವಾಗಿರುತ್ತದೆ. ಯುವ ವಕೀಲರಿಗೆ ಅವರ ಜೀವನ ಮಾದರಿ’ ಎಂದರು.

ಅದಕ್ಕೂ ಮೊದಲು, ಅಸತೋಮ ಸದ್ಗಮಯ ಎಂದು ಶಾಂತಿ ಮಂತ್ರ ಹೇಳಿ ಮೋಹನ ಎಂ. ಶಾಂತನಗೌಡರ್ ಭಾವಚಿತ್ರಕ್ಕೆ ಸಿಜಿಐ ಶ್ರದ್ಧಾಂಜಲಿ ಅರ್ಪಿಸಿದರು. ಮುಖ್ಯಮಂತ್ರಿ ಸಬವರಾಜ ಬೊಮ್ಮಾಯಿ, ನ್ಯಾಯಮೂರ್ತಿಗಳಾದ ನಜೀರ್, ಎ.ಎಸ್. ಬೋಪಣ್ಣ, ಅಭಯ್ ಶ್ರೀನಿವಾಸ್ ಓಕಾ, ಬಿ.ವಿ. ನಾಗರತ್ನ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಪ್ರಭಾರ) ಸತೀಶ್ ಚಂದ್ರ ಶರ್ಮಾ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪುಷ್ಪ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT