ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪರ್ವಕ್ಕೆ ಸಿಹಿ ಸ್ವಾಗತ

Last Updated 30 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಯವ್ವಾ! ಒಕ್ಕಲಗ್ಯಾನ ಹೆಂಡತಿ ನಾನ, ಚರಗ ಹೊಡೀಬೇಕ ಎಳ್ಳಮಾಸಿ ದಿನ...’ ಎಂಬ ಜನಪದ ಹಾಡಿನಂತೆ ರೈತರ ಪವಿತ್ರ ಮತ್ತು ವಿಶಿಷ್ಟ ದಿನವೇ ಹೊಸ ಪರ್ವದ ಮೊದಲ ದಿನ. ಇದುವೇ ಎಳ್ಳ ಅಮವಾಸ್ಯೆ ಹಬ್ಬ.

ಈ ಹಬ್ಬದ ದಿನ ಹೊಲದಲ್ಲಿ ಸಾಮೂಹಿಕ ಪೂಜೆ ಮತ್ತು ಭೋಜನ ಮಾಡುವುದೇ ವಿಶೇಷ ಸಂಪ್ರದಾಯ. ಹಲವಾರು ವರ್ಷಗಳಿಂದ ಬೀದರ್ ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲಿ ಆಚರಣೆಯಲ್ಲಿರುವ ಈ ಹಬ್ಬದಲ್ಲಿ ವಿಶೇಷ ಭೋಜನಗಳದ್ದೇ ಕಾರುಬಾರು.

ಹಬ್ಬದ ಹಿನ್ನೆಲೆ
ಹಿಂಗಾರು ಹಂಗಾಮಿನಲ್ಲಿ ಬಿತ್ತುವ ಬಿಳಿಜೋಳ, ಕಡಲೆ, ಗೋಧಿ ಬೆಳೆಗಳು ಹುಲುಸಾಗಿ ಬೆಳೆಯಲಿ ಎಂದು ಪ್ರಾರ್ಥಿಸುವ ಹಬ್ಬವೇ ಎಳ್ಳ ಅಮವಾಸ್ಯೆ . ದೀಪಾವಳಿಯಿಂದ ಚಳಿಯು ಕ್ರಮೇಣ ಹೆಚ್ಚುತ್ತಾ ಈ ಅಮವಾಸ್ಯೆಯಿಂದ ಎಳ್ಳು ಕಾಳಿನಷ್ಟು ಕಡಿಮೆಯಾಗುವ ಹಾಗೂ ಬಿಸಿಲು ಎಳ್ಳು ಕಾಳಿನಷ್ಟು ಹೆಚ್ಚಾಗುವುದರಿಂದ ಎಳ್ಳ ಅಮವಾಸ್ಯೆ ಹೆಸರು ಬಂದಿರಬಹುದು ಎಂಬುದು ಬಲ್ಲವರ ಅಭಿಮತ.

ವಿಧಿ- ವಿಧಾನ
ವಿಭಿನ್ನ ಮತ್ತು ವಿಶಿಷ್ಟವಾದ ಈ ಹಬ್ಬದ ಆಚರಣೆ ಸಂದರ್ಭದಲ್ಲಿ ಪೊಟ್ಟರಕಿ (ಹೊಡಿ)ಯಲ್ಲಿದ್ದ ಬಿಳಿಜೋಳದ ತೆನೆಗಳು ಹೊರಬರುವ ತವಕದಲ್ಲಿರುತ್ತವೆ. ಇದನ್ನು ಸಮೃದ್ಧ ಬೆಳೆಯ ಸಂಕೇತವೆಂದು ಬಗೆದು ರೈತರು ಸೀಮಂತ ಮಾದರಿಯಲ್ಲಿ ಹೊಲದ ಕೊಂಪಿಯಲ್ಲಿ ಲಕ್ಷ್ಮೀ ಪ್ರತಿಷ್ಠಾಪಿಸುವರು. ಬಳೆ- ಕುಪ್ಪಸ ತೊಡಿಸಿ ಅರಿಶಿಣ, ಕುಂಕುಮ, ಹೂವು ಏರಿಸಿ ಪೂಜಿಸುವರು. ಪಾಂಡವರಿಗೆ ಮತ್ತು ಲಕ್ಷ್ಮಿಗೆ ನೈವೇದ್ಯ ಅರ್ಪಿಸಿದ ಬಳಿಕ ಬೆಳೆಗೆ ಯಾವುದೇ ರೋಗ ಬಾಧೆಯಾಗದೇ ಒಳ್ಳೆಯ ಫಸಲು ಬರಲೆಂದು ಅರ್ಥೈಸುವ ವಲಗೆ-ವಲಗೆ ಚಾಂಗೋಂದ ಪಲಗೆ ಎನ್ನುತ್ತ ಹೊಲದಲ್ಲೆಲ್ಲ ಚರಗ ಸಿಂಪಡಿಸಿ ಉತ್ತಮ ಫಸಲಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸುವರು. ನಂತರ ಎಲ್ಲರ ಸಾಮೂಹಿಕ ಊಟ.

ಹಬ್ಬದ ಸಿದ್ಧತೆ
ಈ ಹಬ್ಬದ ಹಿಂದಿನ ದಿನ ಮಹಿಳೆಯರೆಲ್ಲ ನೀರೆರೆದುಕೊಂಡು ಮಾಗಿ ಚಳಿಗೆ ತಕ್ಕುದಾದ ವಿಶೇಷ ವೈಜ್ಞಾನಿಕ ಪರಂಪರೆಯಿರುವ ಹಬ್ಬದೂಟದ ಸಿದ್ಧತೆಯಲ್ಲಿ ತೊಡಗುವರು. ಮೆಂತ್ಯ, ಪಾಲಕ್, ಕೊತ್ತಂಬರಿ, ಈರುಳ್ಳಿ ಸೊಪ್ಪುಗಳನ್ನು, ಅವರೆ, ತೊಗರಿ, ಬಟಾಣಿ, ಶೇಂಗಾ, ಕಡಲೆಯ ಹಸಿಕಾಳುಗಳನ್ನು, ಕಡಲೆಹಿಟ್ಟು, ಹಸಿ ಮೆಣಸಿನಕಾಯಿ, ಹುಣಸೆಕಾಯಿ ಮತ್ತು ಶುಂಠಿ, ಬೆಳ್ಳುಳ್ಳಿ ಮುಂತಾದವನ್ನು ಬಳಸಿ ರುಚಿಕಟ್ಟಾದ ಭಜ್ಜಿ ಪಲ್ಯೆ ತಯಾರಿಸುವುದೇ ಈ ಹಬ್ಬದ ವಿಶೇಷತೆ. ಇದರೊಂದಿಗೆ ಶೇಂಗಾ -ಎಳ್ಳಿನ ಹೋಳಿಗೆ ಮತ್ತು ಚಟ್ನಿ, ಸಜ್ಜೆ- ಜೋಳದ ರೊಟ್ಟಿ, ಜೋಳದ ಅನ್ನ, ಅಂಬಲಿ, ಅಕ್ಕಿಹುಗ್ಗಿ, ಧಪ್ಪಟ್ಟಿ, ಬೆಲ್ಲದ ಕರಚೆಕಾಯಿ ತಯಾರಿಸಲಾಗುತ್ತದೆ. ಭಜ್ಜಿಪಲ್ಯೆ ಎಲ್ಲೆಡೆ ಸರ್ವೇ ಸಾಮಾನ್ಯ. ಕೆಲವೆಡೆ ಜೋಳ ಮತ್ತು ಸಜ್ಜೆರೊಟ್ಟಿ ಬದಲಾಗಿ ಸಜ್ಜೆ ಮತ್ತು ಜೋಳದ ಕಡುಬು, ಕೆಲವಡೆ ಶೇಂಗಾ ಮತ್ತು ಹೂರಣ ಹೋಳಿಗೆ ಸಿದ್ಧಪಡಿಸುವರು.

ಸಾಮೂಹಿಕ ಊಟದ ಮಹತ್ವ
ರೈತರು ನಸುಕಿನಲ್ಲೇ ಮೌನವಾಗಿ ಅಂಬಲಿ ಗಡಿಗೆ ಹೊಲಕ್ಕೆ ತಂದಿಟ್ಟ ಬಳಿಕವೇ ಊಟದ ಪದಾರ್ಥಗಳೊಂದಿಗೆ ಸ್ನೇಹಿತರು, ನೆರೆಹೊರೆಯವರ, ಕುಟುಂಬದವರೆಲ್ಲ ಹೊಲಕ್ಕೆ ಬಂದು ಸಾಮೂಹಿಕ ಊಟ ಮಾಡುವರು. ಜಾನಪದ ಕಥೆಯೊಂದರಲ್ಲಿ ಈ ಹಬ್ಬದಂದು ಮಾರುವೇಷದ ಹೆಣ್ಣು ದೇವತೆಗೆ ರೈತನೊಬ್ಬ ಊಟ ಮಾಡಿಸದೆ ಕಳುಹಿಸಿದ್ದಕ್ಕೆ ಅವಳ ಕಣ್ಣಿನಿಂದ ಉದುರಿದ ಕಾಡಿಗೆಯಿಂದ ಮರುದಿನ ಜೋಳದ ತೆನೆಗಳೆಲ್ಲ ಕಾಡಿಗೆ ತೆನೆಗಳಾಗಿದ್ದವೆಂಬ ಹಿನ್ನೆಲೆಯಲ್ಲಿ ಹಬ್ಬದ ದಿನ ಹೊಲಕ್ಕೆ ಬಂದವರಿಗೆಲ್ಲ ಊಟ ಮಾಡಿಸುವುದು ವಾಡಿಕೆ. ಊಟದ ಬಳಿಕ ಹಿರಿಯರು ವಿಶ್ರಾಂತಿಗೆ ಜಾರಿದರೆ, ಬಾಲಕರು ಗಾಳಿಪಟ ಹಾರಿಸುವ ಮತ್ತು ಬಾಲಕಿಯರು ಕುಂಟೆಬಿಲ್ಲೆ, ಕಣ್ಣು ಮುಚ್ಚಾಲೆ, ಜೋಕಾಲಿಯಂತಹ ಆಟೋಟಗಳಲ್ಲಿ ತೊಡಗಿದರೆ ಹೆಂಗಳೆಯರು ಭುಲಾಯಿ ಹಾಕುವರು.

ಸಂಜೆ ಹಾಲು ಉಕ್ಕಿಸುವ, ಬುಟ್ಟಿಯಲ್ಲಿ ದೀಪದ ಜ್ಯೋತಿಯಿಡುವ, ಜೋಳದ ಐದು ದಂಟುಗಳಿಗೆ ಕುಪ್ಪಸ ಹೊದಿಸುವ, ಊರಿನ ಹನುಮಂತನನ್ನು ನಮಸ್ಕರಿಸುವ, ಕೆಲ ಗ್ರಾಮಗಳಲ್ಲಿ ರಾತ್ರಿ ಬಡಿಗೆ ತಿರುಗಿಸುವ, ಕೀಲು ಕುದುರೆ ಮತ್ತು ಬೆಂಕಿ ನೃತ್ಯ ಮಾಡುವ ಸಂಪ್ರದಾಯವಿದೆ. ಗರ್ಭಿಣಿಯರಿರುವ ಮನೆಗಳ ಬುಟ್ಟಿಗೆ ಜೋಳದ ದಂಟು ಕಟ್ಟುವ ಸಂಪ್ರದಾಯವಿಲ್ಲ.

ಸಹಜೀವನದ ಸಂಕೇತ
ಈ ಹಬ್ಬದಂದು ನಗರವಾಸಿಗಳೂ ಸಹ ಉದ್ಯಾನ, ಅರಣ್ಯವನ, ವಿಹಾರಧಾಮ, ಪ್ರಕೃತಿದತ್ತ ಸ್ಥಳಗಳಿಗೆ ತೆರಳಿ ಬಂಧು-ಮಿತ್ರರೊಡಗೂಡಿ ಸಾವಿರಾರು ಜನರು ಸಾಮೂಹಿಕ ಭೋಜನ ಮಾಡುವರು. ಅಪ್ಪಟ ಕೃಷಿ ಮತ್ತು ಜನಪದ ಸಂಸ್ಕೃತಿ, ಪರಂಪರೆ ಮತ್ತು ಹಳೆಯ ಪಳೆಯುಳಿಕೆಗಳಿಗೆ ಜೀವಂತ ಸಾಕ್ಷಿಯಾಗಿರುವ ಈ ಹಬ್ಬ ಸಹಜೀವನ, ಸ್ನೇಹಬಾಳ್ವೆ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಈ ಸಂಸ್ಕೃತಿಯ ಆಶಯಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಮತ್ತು ಹೊಳಪು ನೀಡುವ ಕಾರ್ಯ ನಡೆಯಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT