ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

RCB vs CSK | ಧೋನಿ vs ಕೊಹ್ಲಿ; ಚಿನ್ನಸ್ವಾಮಿಯಲ್ಲಿ ಮಹಿ ಕೊನೆಯ ಪಂದ್ಯವೇ?

Published 17 ಮೇ 2024, 11:04 IST
Last Updated 17 ಮೇ 2024, 11:04 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ರೋಚಕ ಹಂತವನ್ನು ತಲುಪಿದ್ದು, ಶನಿವಾರ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲು ಇತ್ತಂಡಗಳಿಗೂ ಈ ಪಂದ್ಯ 'ಮಾಡು ಇಲ್ಲವೇ ಮಡಿ' ಎನಿಸಿದೆ. ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವಣ ಹಣಾಹಣಿಗೂ ವೇದಿಕೆ ಸಜ್ಜುಗೊಂಡಿದೆ. ಮೈದಾನದ ಹೊರಗೆ ಧೋನಿ ಹಾಗೂ ಕೊಹ್ಲಿ ಉತ್ತಮ ಬಾಂಧವ್ಯ ಕಾಪಾಡಿಕೊಂಡಿರುವುದರಿಂದ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

42 ವರ್ಷದ ಧೋನಿ, ಪ್ರಸಕ್ತ ಸಾಲಿನ ಐಪಿಎಲ್ ಆರಂಭಕ್ಕೂ ಮುನ್ನ ನಾಯಕತ್ವವನ್ನು ಋತುರಾಜ್ ಗಾಯಕವಾಡ್ ಅವರಿಗೆ ಬಿಟ್ಟುಕೊಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆದರೂ ಗಾಯವನ್ನು ಲೆಕ್ಕಿಸದೆ ತಂಡಕ್ಕಾಗಿ ಆಡುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ಧೋನಿ ಕೊನೆಯ ಐಪಿಎಲ್?

ಹಾಗೊಂದು ವೇಳೆ ಉತ್ತಮ ರನ್‌ರೇಟ್ ಅಂತರದಲ್ಲಿ ಆರ್‌ಸಿಬಿ ಪಂದ್ಯ ಗೆದ್ದರೆ ಸಿಎಸ್‌ಕೆ ಟೂರ್ನಿಯಿಂದಲೇ ನಿರ್ಗಮಿಸಲಿದೆ. ಇದರಿಂದಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಧೋನಿ ಪಾಲಿಗೆ ಐಪಿಎಲ್‌ನ ಕೊನೆಯ ಪಂದ್ಯ ಆಗಿರಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ಇನ್ನೊಂದೆಡೆ ಚೆನ್ನೈ ಗೆದ್ದರೆ ಸಿಎಸ್‌ಕೆ ಪ್ಲೇ-ಆಫ್‌ಗೆ ಲಗ್ಗೆ ಇಡಲಿದೆ. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಇಟ್ಟು, ಎಲಿಮಿನೇಟರ್‌ನಲ್ಲೂ ಗೆದ್ದರೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್‌ಕೆ ಅಭಿಮಾನಿಗಳ ಎದುರು ಆಡುವ ಅವಕಾಶ ಧೋನಿಗೆ ಸಿಗಲಿದೆ.

ಮೊದಲ ಕ್ವಾಲಿಫೈಯರ್ (ಮೇ 21) ಹಾಗೂ ಎಲಿಮಿನೇಟರ್ (ಮೇ 22) ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಎರಡನೇ ಕ್ವಾಲಿಫೈಯರ್ (ಮೇ 24) ಹಾಗೂ ಫೈನಲ್ (ಮೇ 26) ಪಂದ್ಯಗಳು ಚೆನ್ನೈಯಲ್ಲಿ ನಿಗದಿಯಾಗಿದೆ.

ಪದೇ ಪದೇ ಉಲ್ಬಣಿಸುತ್ತಿರುವ ಗಾಯದ ಸಮಸ್ಯೆ ಹಾಗೂ ದೀರ್ಘ ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿರುವುದರಿಂದ ಮುಂದಿನ ಸಲ ಐಪಿಎಲ್‌‌ವರೆಗೂ ಫಿಟ್ನೆಸ್ ಕಾಯ್ದುಕೊಳ್ಳಲು ಧೋನಿಗೆ ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ. ಹಾಗಾಗಿ ಐದು ಬಾರಿಯ ಚಾಂಪಿಯನ್ ಈ ಬಾರಿಯ ಐಪಿಎಲ್ ಬಳಿಕ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT