ಬೆಂಗಳೂರಿನ ವಿಜಯನಗರದ ಕಲಾಂಶು ನೃತ್ಯ ಹಾಗೂ ಸಂಗೀತ ವಿದ್ಯಾಸಂಸ್ಥೆಯು ಕಲಾಕ್ಷೇತ್ರದ ಸೇವೆಯಲ್ಲಿ ನೂತನ ಹೆಜ್ಜೆ ಇಡುತ್ತಿದ್ದು, ಶ್ರೇಷ್ಠ ಕಲಾ ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ `ಕಲಾಂಶು ಕಲಾಪ್ರಶಸ್ತಿ~ಯೊಂದನ್ನು ಈ ಹಿಂದೆ ಘೋಷಿಸಿತ್ತು. ನಿರ್ದೇಶಕಿ ವಿದುಷಿ ಸುಪ್ರಿಯಾ ಹರಿಪ್ರಸಾದರ ಸೇವಾಕ್ಷಮತೆಯಿಂದ, ದಿ. ಸದಾನಂದ ಮಡಿ ಸ್ಮರಣಾರ್ಥ ಈ ಪ್ರಶಸ್ತಿ ಕೊಡಲಾರಂಭಿಸಲಾಗಿದ್ದು, ನಗರದ ಎ.ಡಿ.ಎ. ರಂಗಮಂದಿರದಲ್ಲಿ ಜ.7ರ ಸಂಜೆ ನಡೆದ `ಕಲಾಂಶು~ ಸಂಸ್ಥೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ವೈಜಯಂತಿಕಾಶಿ ಅವರಿಗೆ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಬಿಬಿಎಂಪಿ ಸದಸ್ಯ ಕೆ. ಉಮೇಶ ಶೆಟ್ಟಿ, ಕ.ಪ್ರ. ಹೋಟೆಲು ಸಂಘದ ಅಧ್ಯಕ್ಷ ಬಾ. ರಾಮಚಂದ್ರ ಉಪಾಧ್ಯ, ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಎ.ಜಿ. ದೇಶಪಾಂಡೆ, ನಿರ್ದೇಶಕಿ ಸುಪ್ರಿಯಾ ಹರಿಪ್ರಸಾದ್, ಸಹ ನಿರ್ದೇಶಕಿ ಡಾ. ಕೀರ್ತನ ಕುಣಿಕುಳ್ಳಾಯ ಹಾಗೂ ಯು.ಜೆ. ಕುಣಿಕುಳ್ಳಾಯ ಮತ್ತಿತರರು ಉಪಸ್ಥಿತರಿದ್ದರು.