ನವದೆಹಲಿ: ದುರ್ವತನೆ ತೋರಿ ವಿಮಾನ ವಿಳಂಬಕ್ಕೆ ಕಾರಣರಾಗುವ ಪ್ರಯಾಣಿಕರಿಗೆ ₹15 ಲಕ್ಷದ ವರೆಗೂ ದಂಡ ವಿಧಿಸುವ ಕ್ರಮಕ್ಕೆ ಏರ್ ಇಂಡಿಯಾ ಮುಂದಾಗಿದೆ.
ಶಿವಸೇನೆಯ ಸಂಸದ ರವೀಂದ್ರ ಗಾಯಕ್ವಾಡ್ ದೇಶೀಯ ವಿಮಾನ ಸೇವಾ ಸಂಸ್ಥೆ ಏರ್ ಇಂಡಿಯಾದ ಮ್ಯಾನೇಜರ್ ಒಬ್ಬರ ಮೇಲೆ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಶಿಸ್ತು ಕ್ರಮ ರೂಪಿಸುತ್ತಿದೆ.
ಒಂದು ಗಂಟೆವರೆಗಿನ ವಿಮಾನ ವಿಳಂಬಕ್ಕೆ ಕಾರಣವಾಗುವ ಪ್ರಯಾಣಿಕರಿಗೆ ₹5 ಲಕ್ಷ, ಒಂದರಿಂದ ಎರಡು ಗಂಟೆ ವರೆಗಿನ ವಿಳಂಬಕ್ಕೆ ₹10 ಲಕ್ಷ ಹಾಗೂ ವಿಮಾನ ಹೊರಡುವುದು ಎರಡು ಗಂಟೆಗಿಂತ ಹೆಚ್ಚು ವಿಳಂಬವಾದಲ್ಲಿ ₹15 ಲಕ್ಷದ ವರೆಗೂ ದಂಡ ವಿಧಿಸಬಹುದಾದ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.
ಹಲ್ಲೆ ಪ್ರಕರಣದ ನಂತರ ಮಾ.23ರಿಂದ ಸಂಸದ ರವೀಂದ್ರ ಗಾಯಕ್ವಾಡ್ ಅವರ ಪ್ರಯಾಣಕ್ಕೆ ಏರ್ ಇಂಡಿಯಾ ಹಾಗೂ ಇತರೆ ಐದು ವಿಮಾನ ಸಂಸ್ಥೆಗಳು ನಿಷೇಧ ಹೇರಿದ್ದವು. ಸಂಸದ ರವೀಂದ್ರ ಅವರು ಕ್ಷಮೆಯಾಚಿಸಿದ ಬಳಿಕ ನಿಷೇಧ ತೆರವುಗೊಳಿಸಲಾಯಿತು.