ಜಮ್ಮು: ಕದನವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನೆ ಗುರುವಾರ ಬೆಳಿಗ್ಗೆ ಜಮ್ಮು–ಕಾಶ್ಮೀರದ ರಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಗುಂಡಿನ ದಾಳಿ ಮಾಡಿದೆ. ಭಾರತೀಯ ಸೇನೆ ದಾಳಿಗೆ ಪ್ರತಿ ದಾಳಿ ನಡೆಸಿದೆ.
ಭಾರತ–ಪಾಕ್ ಭದ್ರತಾ ಪಡೆಯ ಮಧ್ಯೆ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ಸೇನೆಯು ರಜೌರಿ ಜಿಲ್ಲೆಯ ನೌಶೇರಾ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ಬೆಳಿಗ್ಗೆ 7.30ಕ್ಕೆ ಗುಂಡು ಹಾರಿಸಿದೆ ಎಂದು ರಕ್ಷಣಾ ಪಡೆಯ ವಕ್ತಾರರು ತಿಳಿಸಿದ್ದಾರೆ.
ಮತ್ತೊಂದು ಕಡೆ ಪೂಂಚ್ ಜಿಲ್ಲೆಯ ಕೃಷ್ಣಗಿತಿ ವಲಯದಲ್ಲಿ ಪಾಕ್ ಸೇನೆ ಬೆಳಿಗ್ಗೆ 7.40ರಿಂದ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
‘ಪಾಕ್ ದಾಳಿ ನಡೆಸಿದ ಪ್ರದೇಶದಲ್ಲಿ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ಮುಂದುವರಿದಿದೆ’ ಎಂದು ಸೇನೆ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನ ಪಡೆದ ಮೇ 15ರಂದು ರಜೌರಿ ಜಿಲ್ಲೆಯ ಬಾಲಕೋಟೆ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ನೆಲೆಗಳನ್ನು ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿತ್ತು.
ಮೇ 16 ಮತ್ತು 17ರಂದು ರಜೌರಿ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ನಾಗರಿಕ ವಸತಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿತ್ತು.
ಪ್ರಸಕ್ತ ವರ್ಷದ ಮೇ ವರೆಗೆ ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಯು 12,000ಕ್ಕಿಂತಲೂ ಹೆಚ್ಚು ಜನರ ಜೀನವದ ಮೇಲೆ ಮೇಲೆ ಪರಿಣಾಮ ಬೀರಿದೆ.