ಹುಮನಾಬಾದ್: ‘ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ದಲಿತರ ಓಣಿಯಲ್ಲಿ ಉಪಾಹಾರ ಸೇವಸಿ ನಂತರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರ ಜನರ ನಂಬಿಕೆಗೆ ದ್ರೋಹ ಬಗೆದಿದೆ. ಬೆಳೆಹಾನಿ ಪರಿಹಾರ ನೀಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ರೈತರ ಖಾತೆಗೆ ಹಾಕದೆ ಕೇಂದ್ರದತ್ತ ಬೊಟ್ಟ ಮಾಡುತ್ತಿರುವುದು ರೈತ ವಿರೋಧಿ ನೀತಿ’ ಎಂದು ದೂರಿದರು.
‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ರೈತರ ಪ್ರತಿ ಎಕರೆಗೆ ₹ 25 ಸಾವಿರದಿಂದ ₹1 ಲಕ್ಷ ಪರಿಹಾರ ನೀಡಲಾಗಿತ್ತು. ನಾಡಿಗೆ ಅನ್ನ ನೀಡುವ ರೈತರಿಗಾಗಿ ₹10 ಸಾವಿರ ಕೋಟಿ ನಿಗದಿಪಡಿಸಲು ಆಗದಿರುವುದು ರೈತ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ’ ಎಂದು ಟೀಕಿಸಿದರು.
‘ಮಹಿಳೆಯರು ಹಾಗೂ ದಲಿತರಿಗೆ ಬಿಜೆಪಿ ಸರ್ಕಾರದಲ್ಲಿ ನೀಡಿದಷ್ಟು ಸೌಲಭ್ಯವನ್ನು ಬೇರಾವ ಸರ್ಕಾರ ನೀಡಿಲ್ಲ. 150 ಸ್ಥಾನ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ಪಣತೊಡಲಾಗಿದೆ. ಯಶಸ್ಸು ಕಾಣುತ್ತೇವೆ. ಅದಕ್ಕೆ ದಲಿತರು, ಮಹಿಳೆಯರು ಆಶೀರ್ವದಿಸಬೇಕು’ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಅಲ್ಪಸಂಖ್ಯಾತರು ಹಾಗೂ ದಲಿತರು ಈವರೆಗೆ ಕಾಂಗ್ರೆಸ್ಗೆ ಮನನೀಡಿ, ಮೋಸ ಹೋಗಿದ್ದಾರೆ. ಸ್ವಾತಂತ್ರ್ಯ ಸಿಕ್ಕ ನಂತರ ಏಳು ದಶಕದಲ್ಲಿ 57 ವರ್ಷ ಕಾಂಗ್ರೆಸ್ ಕೈಯಲ್ಲಿ ಆಡಳಿತವಿತ್ತು. ಆದರೆ, ಯಾವುದೇ ಅಭಿವೃದ್ಧಿ ಕೆಲಸ ಗಳು ಆಗಿಲ್ಲ. ಅನಕ್ಷರತೆ, ನಿರುದ್ಯೋಗ ಸಮಸ್ಯೆ ಈಗಲು ಸಮಸ್ಯೆ ಆಗಿಯೇ ಉಳಿದುಕೊಂಡಿವೆ’ ಎಂದು ದೂರಿದರು.
‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ದೇವದಾಸಿಯರಿಗೆ ₹500 ಮಾಸಾಶನ ಘೋಷಿಸಿದ್ದರು. 7 ಜನ ದಲಿತರಿಗೆ ಸಚಿವ ಸ್ಥಾನ ನೀಡಲಾಗಿತ್ತು’ ಎಂದರು.
ಸಂಸದ ಭಗವಂತ ಖೂಬಾ, ಶಾಸಕ ಪ್ರಭು ಚವಾಣ, ರಘುನಾಥ ಮಲ್ಕಾಪೂರೆ, ಮಾಜಿ ಶಾಸಕ ಸುಭಾಷ ಜಿ.ಕಲ್ಲೂರ, ಪ್ರಕಾಶ ಖಂಡ್ರೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಅಧ್ಯಕ್ಷ ಶಿವಾನಂದ ಗಂದಗೆ, ಪಕ್ಷದ ಜಿಲ್ಲಾ ಘಟಕ ಉಪಾಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಪಾಟೀಲ, ಪದ್ಮಾಕರ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಪ್ರವೀಣ ಸಿರಂಜಿ, ಪ್ರಭು ನಾಗರಾಳೆ ಇದ್ದರು.ಇದಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ 9ರ ಪಕ್ಕದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿದರು.
**
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನನ್ನು ಟೀಕಿಸುವ ಹಕ್ಕಿಲ್ಲ. ಕಾಂಗ್ರೆಸ್ನವರು ಮಾಡು ತ್ತಿರುವ ಆರೋಪದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
**
‘ಕಾರಂಜಾ ಸಂತ್ರಸ್ತರಿಗೆ ಪ್ಯಾಕೇಜ್’
ಚಿಟಗುಪ್ಪ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಲ್ಲೆಯ ಕಾರಂಜಾ ಸಂತ್ರಸ್ತ ರೈತರ ಹಲವು ವರ್ಷಗಳ ಬೇಡಿಕೆ ಈಡೇರಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶುಕ್ರವಾರ ರೇಕುಳಗಿ ಗ್ರಾಮದಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು. ‘ರಾಜ್ಯದಲ್ಲಿ ಭೀಕರ ಬರ ಇದೆ. ಆದರೂ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುತ್ತಿಲ್ಲ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.