ಬೆಂಗಳೂರು: ಇನ್ನೂ ಬಿಡುಗಡೆಯಾಗದ ಜಿಂದಾ ಸಿನಿಮಾದ ಒಂದು ಖಡಕ್ ಡೈಲಾಗ್ಗೆ ಯುವಕರು ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಮುಸ್ಸಂಜೆ ಮಹೇಶ್ ನಿರ್ದೇಶನದ ’ಜಿಂದಾ’ ಸಿನಿಮಾದಲ್ಲಿ ನಟಿ ಮೇಘನಾ ರಾಜ್, ‘ಈ ಗಂಡು ಅನ್ನೋ ಒಬ್ಬ ಕಚಡ ನನ್ ಮಗಾನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ವಲ್ಲ ಯಾಕೆ ಸರ್?’ ಎಂಬ ಡೈಲಾಗ್ ಹೇಳುತ್ತಾರೆ. ಇದರಿಂದ ಯುವಕರಿಗೆ ಅವಮಾನ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಜಿಂದಾ ಸಿನಿಮಾ ತಂಡ ಬಿಡುಗಡೆ ಮಾಡಿರುವ ಟ್ರೇಲರ್ನಲ್ಲಿ ಈ ಖಡಕ್ ಡೈಲಾಗ್ ಇದೆ. ಭಾನುವಾರ ಕೆಲ ಯುವಕರು ಮತ್ತು ಸಂಘಟನೆಗಳು ನಟಿ ಮೇಘನಾ ರಾಜ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಮೇಘನಾ ರಾಜ್ ಅವರು ಮೊದಲು ಸಿನಿಮಾ ನೋಡಿ ನಂತರ ಪ್ರತಿಭಟನೆ ಮಾಡಿ ಎಂದು ಹೇಳಿದ್ದಾರೆ.
ಜಿಂದಾ ಸಿನಿಮಾ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಚಿತ್ರ ಜೂನ್ 9 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.