ಹುಬ್ಬಳ್ಳಿ: ‘ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಹೀಗಾಗಿಯೇ, ಇಂದು ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿವೆ’ ಎಂದು ಸಂಯುಕ್ತ ಜನತಾದಳದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲಗೌಡ ಕಮತರ ಹೇಳಿದರು.
ಬೊಮ್ಮಾಯಿ ಅವರ 94ನೇ ಜನ್ಮದಿನದ ಅಂಗವಾಗಿ ಮಂಗಳವಾರ ಇಲ್ಲಿನ ಕೋರ್ಟ್ ವೃತ್ತದ ಬಳಿ ಇರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ‘ಕಳಸಾ–ಬಂಡೂರಿ ನಾಲಾ ಜೋಡಣೆ ಹಾಗೂ ಮಹಾದಾಯಿ ನದಿ ನೀತು ಹಂಚಿಕೆ ವಿವಾದವನ್ನು ಪರಿಹರಿಸಲು ಗೋವಾದ ಅಂದಿನ ಮುಖ್ಯಮಂತ್ರಿ ಪ್ರತಾಪಸಿಂಗ್ ರಾಣೆ ಅವರೊಂದಿಗೆ ಚರ್ಚೆ ನಡೆಸಿದ್ದರು.
ಧಾರವಾಡದಲ್ಲೇ ಐಐಟಿ ಸ್ಥಾಪಿಸಲು ಆಗಲೇ ಯೋಜಿಸಿದ್ದರು. ಕೇಂದ್ರವು ಜನರಿಂದ ಚುನಾಯಿತವಾದ ಸರ್ಕಾರವನ್ನು ಸುಲಭವಾಗಿ ಪದಚ್ಯುತಿಗೊಳಿಸದಿರುವಂತೆ ಖಾತ್ರಿಪಡಿಸಲು ಸುಪ್ರೀಂಕೋರ್ಟ್ ತೀರ್ಪು ನೀಡಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಬೊಮ್ಮಾಯಿ ಅವರೇ ಕಾರಣ’ ಎಂದರು.
ಜೆಡಿಯು ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಸಾವಿತ್ರಿ ಗುಂಡಿ ಮಾತನಾಡಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರೋಜ್ ಖಾನ್ ಹವಾಲ್ದಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಗಂಗಣ್ಣವರ, ರಾಜು ನಾಯಕವಾಡಿ ಇದ್ದರು.