ದಾಬಸ್ಪೇಟೆ: ನೆಲಮಂಗಲ ತಾಲ್ಲೂಕು ಗೋವಿಂದಪುರ ಗ್ರಾಮದಲ್ಲಿ ಸಮುದಾಯ ಭವನವನ್ನು ನಿರ್ಮಿಸಿ ಸುಮಾರು10 ವರ್ಷಗಳು ಕಳೆದಿದ್ದರೂ ಇನ್ನೂ ಉದ್ಘಾಟನೆ ಭಾಗ್ಯ ದೊರೆತಿಲ್ಲ.
ಭವನದ ಸುತ್ತಲೂ ಬೇಲಿ ಗಿಡಗಳು ಬೆಳೆದಿವೆ. ಕಿಟಕಿಯ ಕಂಬಿಗಳು ತುಕ್ಕು ಹಿಡಿಯುತ್ತಿವೆ. ಮೆಟ್ಟಿಲುಗಳು ಪಾಚಿಯಿಂದ ಕೂಡಿವೆ. ಭವನದೊಳಗೆ ದೂಳು, ಕಸ ಕಡ್ಡಿ ತುಂಬಿದೆ. ಭವನದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಅದು ಅಪೂರ್ಣವಾಗಿದೆ.
‘16 ವರ್ಷಗಳ ಹಿಂದೆ ಭವನದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹಣಕಾಸಿನ ಕೊರತೆಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಐದಾರು ವರ್ಷಗಳ ಬಳಿಕ ಕಟ್ಟಡದ ಕಾಮಗಾರಿ ಭಾಗಶಃ ಪೂರ್ಣಗೊಂಡರೂ ಇನ್ನೂ ಸಾರ್ವಜನಿಕರ ಬಳಕೆಗೆ ಅವಕಾಶ ಮಾಡಿಕೊಟ್ಟಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.