ತುರಾ (ಮೇಘಾಲಯ): ಹತ್ಯೆಗಾಗಿ ಜಾನುವಾರು ಮಾರಾಟ ಮಾಡುವುದನ್ನು ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಮೇಘಾಲಯದ 5,000 ಬಿಜೆಪಿ ಕಾರ್ಯಕರ್ತರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಗೋಮಾಂಸ ಸೇವಿಸುವ ಬುಡಕಟ್ಟು ಮತ್ತು ಇತರ ಸಮುದಾಯಗಳ ಆಹಾರದ ಹಕ್ಕನ್ನು ಹತ್ತಿಕ್ಕುವ ಎನ್ಡಿಎ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ರಾಜೀನಾಮೆ ನೀಡಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ತುರಾ ನಗರ ಘಟಕದ ಅಧ್ಯಕ್ಷ ವಿಲ್ವರ್ ಗ್ರೆಹಾಮ್ ತಿಳಿಸಿದ್ದಾರೆ.
‘ನಮ್ಮನ್ನು ನಂಬಿರುವ, ನಮ್ಮದೇ ಜನರ ಭಾವನೆಗಳ ಜತೆ ಆಟವಾಡಲಾಗದು. ಈ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ. ನಮ್ಮ ಬುಡಕಟ್ಟು ನಾಡನ್ನು, ಸಂಸ್ಲೃತಿಯನ್ನು ನಾವು ರಕ್ಷಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಜಾನುವಾರು ಮಾರಾಟದ ಮೇಲಿನ ನಿರ್ಬಂಧ ತೆರವುಗೊಳಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಕಳೆದ ವಾರವಷ್ಟೇ ಮೇಘಾಲಯದ ಬಿಜೆಪಿ ನಾಯಕರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ನಂತರ ಕೆಲವು ಮುಖಂಡರು ರಾಜೀನಾಮೆಯನ್ನೂ ನೀಡಿದ್ದರು.