ಬೆಂಗಳೂರು: ಯುನೈಟೆಡ್ ಬೆಂಗಳೂರು ಮತ್ತು ಆರ್.ಆರ್.ನಗರ ಐ ಕೇರ್ ಸಮೂಹವು ಹಲಗೆವಡೆರಹಳ್ಳಿ ಕೆರೆಯಂಗಳದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿತ್ತು.
ಇದರಲ್ಲಿ ಭಾಗವಹಿಸಿದ್ದ ನೂರಾರು ಜನರು ಕೆರೆಯಂಗಳದಲ್ಲಿ ಬಿದ್ದಿದ್ದ ಕಸವನ್ನು ಆಯ್ದರು. ವಿವಿಧ ಶಾಲೆಗಳ ಮಕ್ಕಳು ಹಾಗೂ ಚಿತ್ರನಟ ಗಣೇಶ್ ಕೆರೆ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿ, ಸುತ್ತಲಿನ ನಡಿಗೆ ಪಥದ ಬದಿಯಲ್ಲಿ ಗಿಡಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದರು.
ಮಕ್ಕಳು ಕೆರೆಯ ಸುತ್ತಲಿನ ವಸತಿ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಮತ್ತು ಕಸವಿಲೇವಾರಿ ಕುರಿತ ಭಿತ್ತಿಫಲಕಗಳನ್ನು ಪ್ರದರ್ಶಿಸುತ್ತ, ಘೋಷಣೆಗಳನ್ನು ಕೂಗುತ್ತ ಜನರಿಗೆ ಸಂದೇಶ ತಲುಪಿಸಿದರು.
ಗಣೇಶ್, ‘ಕೆರೆಗಳ ವಿನಾಶದಿಂದ ನಗರವು ನಿರ್ಜಲೀಕರಣಗೊಳ್ಳುತ್ತಿದೆ. ಹಾಗಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹಿಂದೆ 300–400 ಅಡಿಗಳವರೆಗೆ ಕೊರೆದಾಗ ಕೊಳವೆಬಾವಿಯಲ್ಲಿ ನೀರು ಸಿಗುತ್ತಿತ್ತು. ಆದರೀಗ 1,000 ಅಡಿಗಿಂತ ಹೆಚ್ಚು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ.
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಗರದ ಕೆರೆಗಳ ಜಾಗವನ್ನು ಒತ್ತುವರಿ ಮಾಡುತ್ತಿವೆ. ಮುಂದಿನ ಪೀಳಿಗೆಗೆ ನೀರು ಸಿಗಬೇಕಾದರೆ ಕೆರೆಗಳನ್ನು ಉಳಿಸಬೇಕು. ಜಲಜಾಗೃತಿಯಲ್ಲಿ ತೊಡಗಿರುವ ಸಂಘಟನೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ’ ಎಂದರು.