ಹುಬ್ಬಳ್ಳಿ: ಇಲ್ಲಿನ 36ನೇ ವಾರ್ಡ್ನ ರಾಮಕೃಷ್ಣ ನಗರದ ಮುಖ್ಯ ರಸ್ತೆ ಅಭಿವೃದ್ಧಿಗೆ ಸ್ಥಳೀಯ ಕಾರ್ಪೊರೇಟರ್ ಅಡ್ಡಿಯಾಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ವಿದ್ಯಾನಗರದಿಂದ ವಿಮಾನನಿಲ್ದಾಣವನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ಬಾಲಮಾರುತಿ ಮಂದಿರದ ಸಮೀಪ ಸುಮಾರು 40 ಮೀಟರ್ ರಸ್ತೆ ಕಾಮಗಾರಿ ಆರೇಳು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ಇದರಿಂದಾಗಿ ಈ ಭಾಗದ ನಿವಾಸಿಗಳು ಪ್ರತಿದಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಬೇಸಿಗೆಯಲ್ಲಿ ದೂಳು, ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುವ ಈ ರಸ್ತೆಯಲ್ಲಿ ಸಂಚರಿಸುವುದು ತೀವ್ರ ಸಮಸ್ಯೆಯಾಗಿದೆ. ಆಸುಪಾಸಿನ ಮನೆಗಳಿಗೆ ದೂಳಿನಿಂದ ಕಿರಿಕಿರಿಯಾಗಿದೆ. ಅಲ್ಲದೇ, ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೂ ತೊಂದರೆಯಾಗಿದೆ.
ರಸ್ತೆ ದುರಸ್ತಿಗೆ ಆಗ್ರಹಿಸಿ ಪಾಲಿಕೆ ಸದಸ್ಯರಿಗೆ, ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ‘ನೀವು ನನಗೆ ವೋಟ್ ಹಾಕಿಲ್ಲ, ರಸ್ತೆ ಏಕೆ ಮಾಡಿಸಬೇಕು’ ಎಂದು ಕಾರ್ಪೊರೇಟರ್ ಉತ್ತರಿಸುತ್ತಾರೆ ಎಂದು ಆರೋಪಿಸಿದ್ದಾರೆ.
‘ಜನಪ್ರತಿನಿಧಿಯೇ ಈ ರೀತಿ ಮಾತನಾಡಿದರೆ ನಮ್ಮ ಗೋಳು ಕೇಳುವವರಾರು’ ಎಂದು ಪ್ರಶ್ನಿಸುತ್ತಾರೆ. ‘ಆದಷ್ಟು ಶೀಘ್ರ ಈ ರಸ್ತೆಯನ್ನು ನಿರ್ಮಿಸಲು ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆದ್ಯತೆ ನೀಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
* *
ವಾರ್ಡ್ ನಂ 36 ರಸ್ತೆ ದುರಸ್ತಿ ನನ್ನ ಗಮನಕ್ಕೆ ಬಂದಿಲ್ಲ. ಪಾಲಿಕೆ ಕಾರ್ಪೊರೇಟರ್ ವ್ಯಾಪ್ತಿಯಲ್ಲಿ ಬರುವ ಕೆಲಸಗಳನ್ನು ಅವರೇ ಮಾಡಿಸುತ್ತಾರೆ ಸಿದ್ಧಲಿಂಗಯ್ಯ ಹಿರೇಮಠ
ಆಯುಕ್ತ , ಮಹಾನಗರ ಪಾಲಿಕೆ
* *
ಮಳೆಗಾಲ ಮುಗಿದ ಬಳಿಕ ಈ ರಸ್ತೆ ದುರಸ್ತಿ ಮಾಡಿಸಲಾಗುವುದು. ಜನ ನನಗೆ ಮತ ಹಾಕಲಿ, ಬಿಡಲಿ ಕಾರ್ಪೊರೇಟರ್ ಆಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಸಂತೋಷ ಹಿರೇಕೆರೂರು
ಸದಸ್ಯ, ವಾರ್ಡ್ ನಂ 36