ಮಡಿಕೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರವನ್ನೇ ಹೊದ್ದು ಮಲಗಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಇಲ್ಲಿ ಶನಿವಾರ ಆರೋಪಿಸಿದರು.
ನಗರದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರವನ್ನು ತೊಲಗಿಸುವ ಭರವಸೆ ನೀಡಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೇರಿದ್ದರು. ರಾಜ್ಯದ ಜನರಿಗೆ ಕೊಟ್ಟಿದ್ದ ಮಾತನ್ನು ಈಗ ತಪ್ಪಿದ್ದಾರೆ. ನಂಬಿಕೆಗಳೂ ಹುಸಿಯಾಗಿವೆ’ ಎಂದು ಟೀಕಿಸಿದರು.
‘ಸಿದ್ದರಾಮಯ್ಯ ಅವರಿಗೆ ಮನುಷ್ಯತ್ವ ಎಂಬುದೇ ಇಲ್ಲ. ಅವರ ನಡವಳಿಕೆಯಿಂದ ಬೇಸತ್ತು ಕಾಂಗ್ರೆಸ್ನ ಹಿರಿಯ ಮುಖಂಡರೂ ಮೌನಕ್ಕೆ ಶರಣಾಗಿದ್ದಾರೆ’ ಎಂದರು.
‘ಕಾಂಗ್ರೆಸ್ ಮೇಲೆ ಬೇಸರವಿಲ್ಲ. ರಾಜ್ಯ ನಾಯಕತ್ವ ವಹಿಸಿರುವ ವ್ಯಕ್ತಿಯ ನಡವಳಿಕೆ ಸರಿಯಿಲ್ಲ’ ಎಂದು ಹೇಳಿದರು.
‘ನಾನು ಇದುವರೆಗೂ ತಾಯಿ– ಮಗನ ಪಕ್ಷದಲ್ಲಿದ್ದೆ. ಹೀಗಾಗಿ, ಜೆಡಿಎಸ್ ಅನ್ನು ಅಪ್ಪ– ಮಕ್ಕಳ ಪಕ್ಷವೆಂದು ಎಲ್ಲಿಯೂ ಆರೋಪಿಸಿಲ್ಲ. ಆ ಅಧಿಕಾರವೂ ನನಗಿಲ್ಲ’ ಎಂದು ಎಚ್.ವಿಶ್ವನಾಥ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು