ಬೆಂಗಳೂರು: ನಮ್ಮ ಧರ್ಮದಲ್ಲಿರುವ ಆಚಾರ–ವಿಚಾರವೇ ನನ್ನನ್ನು ವನ್ಯಜೀವಿ ಲೋಕಕ್ಕೆ ಕರೆದುಕೊಂಡು ಬಂದಿದೆ’ ಎಂದು ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಹೇಳಿದರು.
ಶೀತಲನಾಥ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 21ನೇ ವಾರ್ಷಿಕ ಪೂಜಾಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘ಪ್ರಾಣಿಗಳನ್ನೂ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದ್ದು ಜೈನ ಧರ್ಮ ಮಾತ್ರ. ಅಲ್ಲದೆ, 24 ತೀರ್ಥಂಕರರಲ್ಲಿ 20 ತೀರ್ಥಂಕರರು ತಮ್ಮ ಲಾಂಛನದಲ್ಲಿ ಪ್ರಾಣಿ ಸಂಕೇತವನ್ನು ಹೊಂದಿದ್ದಾರೆ’ ಎಂದರು.
‘ಗೋವಾದಲ್ಲಿ ಮಾತ್ರ ವನ್ಯಜೀವಿ ಉದ್ಯಾನಕ್ಕೆ ಮಹಾವೀರರ ಹೆಸರು ಇಡಲಾಗಿದೆ. ನಮ್ಮ ರಾಜ್ಯದಲ್ಲೂ ಉದ್ಯಾನವೊಂದಕ್ಕೆ ಜೈನ ತೀರ್ಥಂಕರರ ಹೆಸರು ಇಡಲು ನಾವು ಒಕ್ಕೊರಲಿನಿಂದ ಒತ್ತಾಯಿಸಬೇಕು’ ಎಂದು ತಿಳಿಸಿದರು.
ಜೈನ ಸಮುದಾಯದ ವಿಜ್ಞಾನಿ ಬಿ.ಎಸ್. ದಿವಾಕರ್ ಹಾಗೂ ಸಿಐಡಿ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಜಂಬೂ ಮಹಾಜನ್ ಅವರಿಗೆ ಸನ್ಮಾನಿಸಲಾಯಿತು. ಜೀವೇಂದ್ರ ಕುಮಾರ್ ಹೊತುಪೇಟೆ ಭಾಷಾಂತರಿಸಿದ ‘ಆರ್ಜವ ವಾಣಿ’ ಪುಸ್ತಕ ಬಿಡುಗಡೆ ಮಾಡಲಾಯಿತು.