ನವದೆಹಲಿ: ಅಕ್ರಮವಾಗಿ ಸರ್ಕಾರಿ ಜಮೀನು ಸ್ವಾಧೀನಪಡಿಸಿಕೊಡ ಆರೋಪದಲ್ಲಿ ಜೆಟ್ ಏರ್ವೇಸ್ನ ಭದ್ರತಾ ವಿಭಾಗದ ಉಪಾಧ್ಯಕ್ಷ, ಕರ್ನಲ್ (ನಿವೃತ್ತ) ಅವನೀತ್ ಸಿಂಗ್ ಬೇಡಿ ಅವರನ್ನು ಗಾಜಿಯಾಬಾದ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅಕ್ರಮವಾಗಿ ಸರ್ಕಾರಿ ಜಮೀನು ಸ್ವಾಧೀನಪಡಿಸಿಕೊಂಡಿರುವವರ ವಿರುದ್ಧ ಗಾಜಿಯಾಬಾದ್ ಪುರಸಭೆ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದರ ಅನ್ವಯ ಬೇಡಿ ಅವರನ್ನು ಬಂಧಿಸಲಾಗಿದೆ. ಬೇಡಿ ಅವರು ಜಮೀನಿನ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಪೊರೇಟ್ ಭದ್ರತಾ ಕ್ಷೇತ್ರದಲ್ಲಿ ಬೇಡಿ ಅವರಿಗೆ ಹೆಚ್ಚಿನ ಅನುಭವವಿದೆ ಎಂದು ಜೆಟ್ ಏರ್ವೇಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ವ್ಯಕ್ತಿಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ‘ವಾಲ್ಮಾರ್ಟ್ ಇಂಡಿಯಾ’ದಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಬೇಡಿ ಅವರು 2015ರಲ್ಲಿ ಜೆಟ್ ಏರ್ವೇಸ್ ಸೇರಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಲು ಜೆಟ್ ಏರ್ವೇಸ್ ನಿರಾಕರಿಸಿದೆ. ‘ಉದ್ಯೋಗಿಗಳ ವೈಯಕ್ತಿಕ ವಿಷಯಗಳ ಬಗ್ಗೆ ಸಂಸ್ಥೆಯು ಯಾವುದೇ ಹೇಳಿಕೆ ನೀಡುವುದಿಲ್ಲ’ ಎಂದು ಜೆಟ್ ಏರ್ವೇಸ್ನ ವಕ್ತಾರರು ತಿಳಿಸಿದ್ದಾರೆ.