ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ಜನತೆ ಪೊಲೀಸ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅಮಾನುಷ ಕೃತ್ಯ ನಡೆಸುತ್ತಿರುವ ಮತಾಂಧ ಶಕ್ತಿಗಳು ಮತ್ತು ದುಷ್ಕರ್ಮಿಗಳಿಗೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟ ನಡೆ ಸುವುದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳಿಗೆ ಅನಿವಾರ್ಯವಾ ಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿ.ಸಿ.ರೋಡ್ನಲ್ಲಿ ನಿಷೇಧಾಜ್ಞೆ ಇದ್ದರೂ, ಹಿಂದೂಗಳಿಗೆ ಆದ ಅನ್ಯಾ ಯದ ವಿರುದ್ಧ ಆಕ್ರೋಶಿತ ಜನರ ಶಕ್ತಿ ಪ್ರದರ್ಶನವಾಗಿದೆ. ಇದರಲ್ಲಿ ಭಾಗವಹಿ ಸಿದವರ ವಿರುದ್ಧ ಪ್ರಕರಣ ದಾಖಲಿಸುವ ಪೊಲೀಸರಿಗೆ, ಆರ್ಎಸ್ಎಸ್ ಕಾರ್ಯ ಕರ್ತ ಶರತ್ ಹಂತಕರನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಶರತ್ ಅಂತಿಮ ಯಾತ್ರೆಗೂ ಕಲ್ಲು ತೂರಾಟ ನಡೆಸುವ ಹೀನ ಕೃತ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ಕುತ್ತಾರುವಿನಲ್ಲಿ ಚಿರಂಜೀವಿ ಎನ್ನುವ ಯುವಕನ ಮೇಲೆ ತಲವಾರಿನಿಂದ ಹಲ್ಲೆ ನಡೆದಿದೆ. ಹಿಂದೂಗಳ ಸಹನೆಗೂ ಮಿತಿ ಇದೆ. ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಶರತ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಎನ್ಐಎ ತನಿಖೆಗೆ ಕೋರಿಕೆ: ಕರಾವಳಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ವಿನಂತಿಸ ಲಾಗಿದೆ ಎಂದು ನಳಿನ್ಕುಮಾರ್ ಕಟೀಲು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ನಡೆ ಯುತ್ತಿರುವ ಅಮಾ ನುಷ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಜಿಲ್ಲೆಗೆ ಬಂದು ಕಾಂಗ್ರೆಸ್ ಸಮಾವೇಶ ನಡೆಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಇಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುವ ಕನಿಷ್ಠ ಜ್ಞಾನವೂ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಸಚಿವರು, ಬಿಜೆಪಿ ವಿರುದ್ಧ ಪ್ರಚೋ ದನಕಾರಿ ಹೇಳಿಕೆ ನೀಡುತ್ತಿರುವುದೇ ಅಶಾಂತಿ ಮುಂದುವರಿಯಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಶರತ್ ಮನೆಗೆ ಭೇಟಿ: ಶನಿವಾರ ರಾತ್ರಿ ಶರತ್ ಮಡಿವಾಳ ಮನೆಗೆ ಭೇಟಿ ನೀಡಿದ ಸಂಸದ ನಳಿನ್ಕುಮಾರ್ ಕಟೀಲು ಅವರು, ಶರತ್ ತಂದೆ ತನಿ ಯಪ್ಪ ಅವರಿಗೆ ಸಾಂತ್ವನ ಹೇಳಿದರು. ನಂತರ ಮನೆ ಮಂದಿಯ ಜತೆ ಮಾತ ನಾಡಿ, ಧೈರ್ಯ ತುಂಬಿದರು.
ಈ ಸಂದರ್ಭ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಪ್ರಮುಖರಾದ ಬದರೀನಾಥ ಕಾಮತ್ ಇದ್ದರು. ಕುತ್ತಾರುವಿನಲ್ಲಿ ಹಲ್ಲೆಗೀಡಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಚಿರಂಜೀವಿಯನ್ನು ಸಂಸದ ನಳಿನ್ ಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
****
ಶವಯಾತ್ರೆ ಗಲಭೆ ಖಂಡನೀಯ: ಪಾಪ್ಯುಲರ್ ಫ್ರಂಟ್
ಬಂಟ್ವಾಳ:ಶರತ್ ಮಡಿವಾಳ ಅವರ ಶವಯಾತ್ರೆಯಲ್ಲಿ ಸಂಘಪರಿವಾರದ ಗೂಂಡಾಗಳು ಪೂರ್ವಯೋಜಿತ ಗಲಭೆ ಉಂಟು ಮಾಡಿರುವುದು ಖಂಡನೀಯ ಎಂದು ಇಲ್ಲಿನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹೇಳಿದೆ.
ಇಲ್ಲಿನ ಕೈಕಂಬ, ಬಿ.ಸಿ.ರೋಡ್ ಪರಿಸರದಲ್ಲಿ ವಿವಿಧ ಅಂಗಡಿ ಮುಂಗಟ್ಟು ಮತ್ತು ಮುಸ್ಲಿಮರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿ ಉಂಟು ಮಾಡಿದ್ದಾರೆ. ಮಾತ್ರವಲ್ಲದೆ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಮತ್ತು ವಾಹನ ಸವಾರರನ್ನು ವಿಚಾರಿಸಿ ಮುಸ್ಲಿಮನೆಂದು ಖಚಿತಪಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಶವಯಾತ್ರೆ ಮತ್ತು ಮೃತರ ಅಂತಿಮ ದರ್ಶನಕ್ಕಾಗಿ ಪೊಲೀಸರೊಂದಿಗೆ ಪಟ್ಟು ಹಿಡಿದು, ಮಾತಿನ ಚಕಮಕಿ ನಡೆಸಿದ್ದ ಶರಣ್ ಪಂಪ್ವೆಲ್ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೂರ್ವಯೋಜಿತವಾಗಿ ಮುಸ್ಲಿಮರನ್ನು ಗುರಿಯಾಗಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದೆ. .
ಇನ್ನೊಂದೆಡೆ ಶವಯಾತ್ರೆ ವೇಳೆ ಸಂಘ ಪರಿವಾರದ ಕಾರ್ಯಕರ್ತರು ಮಾರಕಾಸ್ತ್ರ ಸಹಿತ ಬಂದಿದ್ದು, ಅಲ್ಲಲ್ಲಿ ತಮ್ಮ ವಾಹನಗಳಲ್ಲಿ ಕಲ್ಲು ಸಂಗ್ರಹಿಸುತ್ತಿರುವ ದೃಶ್ಯ ವಿಡಿಯೊಗಳಲ್ಲಿ ಸ್ಪಷ್ಟವಾಗಿದೆ ಎಂದು ತಿಳಿಸಿದೆ.
ತಾಲ್ಲೂಕಿನಲ್ಲಿ ನಿಷೇದಾಜ್ಞೆ ನಡುವೆಯೇ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬಿ.ಸಿ.ರೋಡ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ದುಷ್ಕರ್ಮಿಗಳ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ನಿರಾಧಾರ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧ ಕಾನೂನು ಹೋರಾಟ ನಡೆಸಲು ಸಂಘಟನೆ ಚಿಂತಿಸಿದ್ದು, ಪೊಲೀಸರು ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದೆ.
***
₹1ಲಕ್ಷ ವೈಯಕ್ತಿಕ ನೆರವು ಹಸ್ತಾಂತರ
ಬಂಟ್ವಾಳ: ಹತ್ಯೆಗೀಡಾದ ಉದಯ ಲಾಂಡ್ರಿ ನಡೆಸುತ್ತಿದ್ದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಕುಮಾರ್ ಅವರ ಮನೆಗೆ ವಿಧಾನಸಭೆ ವಿರೋಧ ಪಕ್ಷ ಮುಖ್ಯಸಚೇತಕ ವಿ.ಸುನೀಲ್ ಕುಮಾರ್ ಭಾನುವಾರ ಭೇಟಿ ನೀಡಿದರು.
ಇಲ್ಲಿನ ಸಜಿಪಮುನ್ನೂರು ಗ್ರಾಮದ ಕಂದೂರು ಮಡಿವಾಳಪಡ್ಪು ಮನೆಗೆ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಅವರೊಂದಿಗೆ ಭಾನುವಾರ ಭೇಟಿ ನೀಡಿದ ಅವರು, ಶರತ್ ತಂದೆ ತನಿಯಪ್ಪ ಮಡಿವಾಳ ಅವರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು. ಇದೇ ವೇಳೆ ₹1 ಲಕ್ಷ ಮೊತ್ತದ ವೈಯಕ್ತಿಕ ನೆರವು ನೀಡಿದರು.
ಈ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನೈಜ ಆರೋಪಿಗಳನ್ನು ಬಂಧಿಸುವಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸು ವುದಾಗಿ ತಿಳಿಸಿದರು.
ಕ್ಷೇತ್ರ ಬಿಜೆಪಿ ಘಟಕ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿ ರಾಮದಾಸ ಬಂಟ್ವಾಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರವಿಂದ್ರ ಕಂಬಳಿ, ಪ್ರಮುಖರಾದ ರಮಾನಾಥ ರಾಯಿ, ಸೀತಾರಾಮ ಪೂಜಾರಿ, ಸ್ಥಳಿಯರಾದ ಪ್ರವೀಣ್ ಗಟ್ಟಿ, ದಯಾನಂದ ಬಿ.ಎಂ., ಅಶೋಕ ಗಟ್ಟಿ, ನವೀನ್ಅಂಚನ್, ಸತೀಶ್ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.