ಶಿಲ್ಲಾಂಗ್: ಭಾರತದಿಂದ ಜಾನುವಾರು ಕಳ್ಳಸಾಗಣೆಯು ಬಾಂಗ್ಲಾದ ಆರ್ಥಿಕತೆಯನ್ನು ಹಾನಿಗೊಳಿಸುತ್ತಿದೆ ಎಂದು ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ(ಬಿಜಿಬಿ) ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ಸಂಬಂಧ ಭಾರತೀಯ ಗಡಿ ಭದ್ರತಾಪಡೆಗೆ(ಬಿಎಸ್ಎಫ್) ಮನವಿ ಮಾಡಿರುವ ಅವರು, ಜಾನುವಾರು ಕಳ್ಳಸಾಗಣೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಔಪಚಾರಿಕವಾಗಿ ಕೋರಿದ್ದಾರೆ.
ಭಾರತದಿಂದ ಹಸುಗಳ ಅಕ್ರಮ ಸಾಗಾಟ ನಡೆದಿದ್ದು, ಇದು ಬಾಂಗ್ಲಾದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಹೀಗಾಗದಿದ್ದರೆ ಬಾಂಗ್ಲಾದ ರೈತರು ತಮ್ಮ ಹಿತರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಬಿಜಿಬಿ ವಲಯ ಕಮಾಂಡರ್ ಎಂ.ಡಿ. ಝಹೀದ್ ಹಸನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳ್ಳಸಾಗಣೆ ತಡೆಗೆ ನಾವು ಬಿಎಸ್ಎಫ್ಗೆ ಮನವಿ ಮಾಡಿದ್ದೇವೆ ಮತ್ತು ಅದಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಅವರು ಹೇಳಿದ್ದಾರೆ.
ಇಲ್ಲಿ ಬಿಎಸ್ಎಫ್ ಮತ್ತು ಬಿಜಿಬಿ ಸಹಯೋಗದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿರುವ ಅಧಿಕಾರಿಗಳು, ಜಾನುವಾರು ಕಳ್ಳಸಾಗಣೆ ವಿಷಯವೂ ಸಮ್ಮೇಳನದ ಕಾರ್ಯಸೂಚಿಯಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.