ಗುರುಮಠಕಲ್: ಸಮೀಪದ ಕೇಶ್ವಾರ ಗ್ರಾಮದ ಉದಯೋನ್ಮುಖ ಕಲಾವಿದ ಭೀಮಾಶಂಕರ ನಿರೇಟಿ ಅವರು ಚಿತ್ರಕಲೆಯ ಮೂಲಕ ಜೀವನ ಕಂಡುಕೊಂಡಿದ್ದಾರೆ.
ಗ್ರಾಮದ ಕೃಷಿಕರಾದ ಭೀಮಶಪ್ಪ ಹಾಗೂ ಪಾಪಮ್ಮ ಅವರ ಮಗನಾದ ಭೀಮಾಶಂಕರ ಅವರಿಗೆ ದ್ವಿತೀಯ ಪಿಯುಸಿವರೆಗೂ ಕಲೆಯ ಬಗ್ಗೆ ಸಾಮಾನ್ಯ ಜ್ಞಾನವೂ, ಕೌಶಲವೂ ಇಲ್ಲದ ಇವರು ದ್ವಿತೀಯ ವರ್ಷದ ಕೊನೆಯಲ್ಲಿ ನೋಡಿದ ಸಿನಿಮಾವೊಂದರಿಂದ ಪ್ರೇರಿತರಾಗಿ ಮೈಗೂಡಿಸಿಕೊಂಡ ಚಿತ್ರಕಲೆ ಈಗ ಭೀಮಾಶಂಕರ ಕೈಹಿಡಿದಿದೆ.
ತೈಲವರ್ಣ, ಜಲವರ್ಣ, ಅಕ್ರೆಲಿಕ್, ಶಿಲಾಕಲೆ, ರೇಖಾಚಿತ್ರ, ಸಾಂಪ್ರದಾಯಿಕ ಕಲೆ, ತಂಜಾವೂರ್ ಗೋಲ್ಡ್ ಲೀಫ್ ಸೇರಿದಂತೆ ಚಿತ್ರಕಲೆಯ ಹಲವು ಮಾಧ್ಯಮಗಳಲ್ಲಿ ಪ್ರಯೋಗ ಮಾಡಿ ಕಲಾರಸಿಕರಿಂದ ಸೈ ಎನಿಸಿಕೊಂಡಿದ್ದಾರೆ.
‘ಚಲನ ಚಿತ್ರವೊಂದರ ಪ್ರಭಾವಕ್ಕೆ ಸಿಲುಕಿ ಕಲಾವಿದನಾದ ನಾನು ಸತತ ಪ್ರಯತ್ನದಿಂದ ರಚಿಸಿದ ಚಿತ್ರಗಳನ್ನು ಇಂದು ಹಲವು ಪ್ರದರ್ಶನ ಕಂಡಿವೆ. ಅಲ್ಲದೇ ಪ್ರಶಸ್ತಿಯನ್ನೇ ತಂದುಕೊಟ್ಟಿವೆ. ಚಿತ್ರಕಲೆ ನನ್ನ ಜೀವನದ ಇಂದು ಭಾಗವಾಗಿದೆ’ ಎಂದು ಹೇಳುತ್ತಾರೆ ಭೀಮಾಶಂಕರ.
‘ಚಿತ್ರಕಲೆಯಿಂದ ನನಗೆ ಯಾವುದೇ ಆದಾಯವಿಲ್ಲವಾದರೂ ಬಣ್ಣಗಳೊಂದಿಗೆ ಆಡುವುದು ನನ್ನ ಮನಸ್ಸಿಗೆ ನೆಮ್ಮದಿಯನ್ನು ಹಾಗೂ ಬದುಕಿನ ಆಸಕ್ತಿಯನ್ನು ಮೂಡಿಸುತ್ತಿದೆ. ರಾಜ ರವಿವರ್ಮ, ಹುಸೇನ್, ಖಂಡೇರಾವ್ ಹಾಗೂ ವಿ.ಜಿ.ಅಂದಾನಿ ನನಗೆ ಸ್ಫೂರ್ತಿನೀಡಿದ ಕಲಾವಿದರು.
ಅವರ ಚಿತ್ರಗಳನ್ನು ಒಮ್ಮೆ ನೋಡಿದರೆ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸುತ್ತವೆ. ಒಂದಾದರೂ ಅವರ ಚಿತ್ರಗಳಂತಹ ಅದ್ಬುತ ಚಿತ್ರವನ್ನು ರಚಿಸಬೇಕು ಎಂಬ ಗುರಿ ಇದೆ’ ಎನ್ನುತ್ತಾರೆ ಅವರು. ಕಲಾವಿದರಾಗಲು ಇಚ್ಛಿಸುವ ಹಾಗೂ ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವರು ಭೀಮಾಶಂಕರ ಅವರನ್ನು ಸಂಪರ್ಕಿಸಿದರೆ ಚಿತ್ರಕಲೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ.
* *
ಕಲೆ ಎನ್ನುವುದು ತಪಸ್ಸು ಇದ್ದ ಹಾಗೆ. ಅದನ್ನು ನಿರಂತರ ಶ್ರಮದಿಂದ ಮಾತ್ರ ಪಡೆದುಕೊಳ್ಳಬಹುದು. ಈ ಕಲೆಯೂ ಈಗ ಜೀವನ ಸಂಗಾತಿಯಾಗಿದೆ. ಭೀಮಾಶಂಕರ ನಿರೇಟಿ, ಕಲಾವಿದ