ರಾಮನಗರ: ‘ಗ್ರಾಮೀಣ ಭಾಗದಲ್ಲಿ ಪೂರ್ವಜರು ಬಿಟ್ಟು ಹೋದ ಸಂಪ್ರದಾಯ ಮತ್ತು ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ದೇಸಿಯ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ’ ಎಂದು ಹಿರಿಯ ರಂಗಭೂಮಿ ಕಲಾವಿದ ಹೊಂಬಯ್ಯನದೊಡ್ಡಿ ಪುಟ್ಟರಾಜು ಹೇಳಿದರು.
ತಾಲ್ಲೂಕಿನ ಕಸಬಾ ಹೋಬಳಿ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಬುದ್ಧಮಿತ್ರ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಈಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಜಾನಪದ ಕಲಾಮೇಳ ಹಾಗೂ ಗೀತಗಾಯನ ಉದ್ಘಾಟಿಸಿ ಮಾತನಾಡಿದರು.
ತಮಟೆ ವಾದ್ಯ, ಡೊಳ್ಳು ಕುಣಿತ, ಪೂಜಾಕುಣಿತ, ಪಟದಕುಣಿತ, ಗೊಂಬೆ ಕುಣಿತ, ಕೋಲುಕುಣಿತ, ಒನಕೆ ಕುಣಿತ, ಹುಲಿವೇಷ, ಹಾಗೂ ವೀರಗಾಸೆ ನೃತ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಮೇಶ್, ಪ್ರಧಾನ ಸಂಚಾಲಕ ಪುನೀತ್ರಾಜ್, ಸಮಾಜ ಸೇವಕ ನಂದೀಶ್, ಟ್ರಸ್ಟಿನ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋವಿಂದರಾಜು ಇತರರು ಇದ್ದರು.
**
ಗ್ರಾಮೀಣ ಸೊಗಡಿನ ಕಲೆಗೆ ಧಕ್ಕೆ
‘ಸಿನಿಮಾ ಮತ್ತು ಧಾರಾವಾಹಿಗಳ ಹಾವಳಿಗೆ ಮಾರುಹೋಗಿರುವ ಜನರು ಗ್ರಾಮೀಣ ಸೊಗಡಿನ ಕಲೆಗಳನ್ನು ಮರೆಯುತ್ತಿದ್ದಾರೆ’ ಎಂದು ಹೊಂಬಯ್ಯನದೊಡ್ಡಿ ಪುಟ್ಟರಾಜು ತಿಳಿಸಿದರು.
‘ಆಚಾರ ವಿಚಾರಗಳಿಲ್ಲದ ಧಾರಾವಾಹಿಗಳ ಹಾವಳಿಯಿಂದ ಹಳ್ಳಿಗಳಲ್ಲೂ ಹಿಂದಿನ ಸಂಪ್ರದಾಯ ಮತ್ತು ಸಂಸ್ಕೃತಿ ಮರೆ ಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ತಿಳಿಸಿದರು.