ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವವಿದ್ಯಾಲಯಗಳ ಮಸೂದೆ ವಿರುದ್ಧ ಪ್ರತಿಭಟನೆ

Last Updated 11 ಆಗಸ್ಟ್ 2017, 20:33 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ವಿಶ್ವವಿದ್ಯಾಲಯಗಳ ಮಸೂದೆ–2017’ ಜಾರಿ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ 'ಕರ್ನಾಟಕ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟ' ನೇತೃತ್ವದಲ್ಲಿ ನೌಕರರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಸೆಂಟ್ರಲ್‌ ಕಾಲೇಜಿನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೌಕರರು, ‘ಮಸೂದೆ ಕೈಬಿಡಿ, ನೌಕರರನ್ನು ರಕ್ಷಿಸಿ’, ‘ನೌಕರರಿಗೂ ಯು.ಜಿ.ಸಿ ವೇತನ ಸಿಗಲಿ’ ಹಾಗೂ ‘ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ಧಕ್ಕೆ ತರಬೇಡಿ’ ಎಂಬ ಘೋಷಣೆಯ ಫಲಕಗಳನ್ನು ಪ್ರದರ್ಶಿಸಿದರು.

ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್‌ ಮಾತನಾಡಿ, ’ವಿಧಾನಸಭೆಯಲ್ಲಿ ಮಸೂದೆಗೆ ಒಪ್ಪಿಗೆ ನೀಡಿ, ವಿಧಾನ ಪರಿಷತ್‌ಗೆ ಕಳುಹಿಸಲಾಗಿದೆ. ಇದು ಜಾರಿಗೆ ಬಂದರೆ, ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಧಕ್ಕೆ ಉಂಟಾಗಲಿದೆ. ಸರ್ಕಾರದ ಹಸ್ತಕ್ಷೇಪವಾಗಿ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಯು ಬುಡಮೇಲಾಗಲಿದೆ’ ಎಂದು ದೂರಿದರು.

’ವಿಶ್ವವಿದ್ಯಾಲಯಗಳ ನೌಕರರ ಕೆಲಸವು ಶಿಕ್ಷಕರು ಹಾಗೂ ಇತರೆ ಉದ್ಯೋಗಿಗಳ ಕೆಲಸಕ್ಕಿಂತ ಭಿನ್ನವಾಗಿದೆ. ಹೀಗಾಗಿ ನೌಕರರ ವೇತನ ಪರಿಷ್ಕರಣೆಗೆ ಪ್ರತ್ಯೇಕ ಆಯೋಗ ರಚಿಸಬೇಕು. ಶಿಕ್ಷಕರಿಗೆ ಸಿಗುವಂತೆ ಯು.ಜಿ.ಸಿ ವೇತನ ನಮಗೂ ಸಿಗುವಂತಾಗಬೇಕು’ ಎಂದರು.

ಸಾಮೂಹಿಕ ರಜೆ: ಒಕ್ಕೂಟದ ಕಾರ್ಯದರ್ಶಿ ಬಿ.ಶ್ರೀಕಾಂತ್‌ ಮಾತನಾಡಿ, ‘ರಾಜ್ಯದ ಎಲ್ಲ ವಿ.ವಿಗಳ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಬೇಡಿಕೆಗೆ ಸರ್ಕಾರವು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟ ನಡೆಸುತ್ತೇವೆ’ ಎಂದರು.

‘ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಹೀಗಾಗಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ನೌಕರರಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಬೇಕು. ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸಲು ಆದೇಶ ಹೊರಡಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT