ಬಾಗಲಕೋಟೆ: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ ನಿಲ್ಲದು ಎಂದು ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ವೀರಶೈವ ವಿಚಾರವಾದಿಗಳು ಈಗಲೂ ಬಸವಣ್ಣ ಧರ್ಮಗುರು, ವಚನ ಸಾಹಿತ್ಯ ಧರ್ಮಗ್ರಂಥ ಅಂಥ ಒಪ್ಪಿಕೊಂಡು ಬಂದರೆ ಅವರನ್ನು ನಮ್ಮ ಜೊತೆಗೆ ಕರೆದುಕೊಳ್ಳುತ್ತೇವೆ. ಆದರೆ, ಅವರು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ನಾವಿಬ್ಬರು ಒಂದುಗೂಡುವುದೂ ಇಲ್ಲ’ ಎಂದು ಹೇಳಿದರು.
‘ಸಚಿವ ಎಂ.ಬಿ.ಪಾಟೀಲ ಅವರು ಒಳ್ಳೆಯ ಭಾವನೆಯಿಂದ ಸಿದ್ದಗಂಗಾ ಶ್ರೀಗಳ ಹೇಳಿಕೆಯನ್ನು ಉಲ್ಲೇಖಿಸಿದ್ದರು. ಸಚಿವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಈ ಪ್ರಕರಣದಿಂದ ಜನರು ಹೆಚ್ಚು ಜಾಗೃತರಾಗಿದ್ದಾರೆಯೇ ವಿನಹ ಚಳವಳಿ ದುರ್ಬಲಗೊಂಡಿಲ್ಲ. ಸಿದ್ದಗಂಗಾ ಶ್ರೀಗಳಿಂದ ಹೇಳಿಕೆ ಕೊಡಿಸಿರುವುದರಿಂದ ನೋವಾಗಿದೆ. ಸಚಿವ ಎಂ.ಬಿ. ಪಾಟೀಲ ಅವರು ಐಕ್ಯಮಂಟಪದಲ್ಲಿ ಕುಳಿತು ಹೋರಾಟಕ್ಕೆ ಶಕ್ತಿ ಕೊಡುವಂತೆ ಕೇಳಿದ್ದಾರೆಯೇ ಹೊರತು ಪಶ್ಚಾತ್ತಾಪಕ್ಕೆ ಅಲ್ಲ. ಆ ಮೂಲಕ ಆತ್ಮಬಲ ಹೆಚ್ಚಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ಸೆ. 24 ರಂದು ಕಲಬುರಗಿ ನಗರದಲ್ಲಿ ಬೃಹತ್ ಹೋರಾಟ ರ್ಯಾಲಿ ಹಮ್ಮಿಕೊಂಡಿರುವುದಾಗಿಯೂ ಮಾತೆ ಮಹಾದೇವಿ ಮಾಹಿತಿ ನೀಡಿದರು.