ನವದೆಹಲಿ: ಬೆಂಗಳೂರು ಬುಲ್ಸ್ ತಂಡ ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ 29–33 ಪಾಯಿಂಟ್ಸ್ಗಳಿಂದ ಬೆಂಗಾಲ್ ವಾರಿಯರ್ಸ್ ಎದುರು ಸೋಲು ಕಂಡಿದೆ. ಬುಲ್ಸ್ ತಂಡದ ಹರೀಶ್ ನಾಯಕ್ ಅವರ ಹೋರಾಟ ವ್ಯರ್ಥವಾಯಿತು. ಈ ಆಟಗಾರ 11 ಪಾಯಿಂಟ್ಸ್ಗಳಿಂದ ಮಿಂಚಿದರು. ಎಲ್ಲಾ ಪಾಯಿಂಟ್ಸ್ಗಳನ್ನೂ ಅವರು ರೈಡಿಂಗ್ನಲ್ಲಿಯೇ ಪಡೆದುಕೊಂಡರು.
ರವೀಂದರ್ ಪಹಾಲ್ ಹಾಗೂ ಮಹೇಂದರ್ ಸಿಂಗ್ ಐದು ಟ್ಯಾಕಲ್ ಪಾಯಿಂಟ್ಸ್ ಗಿಟ್ಟಿಸಿದರು. ಬುಲ್ಸ್ ತಂಡ ‘ಬಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗೆಲುವು ದಾಖಲಿಸಿದ ವಾರಿಯರ್ಸ್ ತಂಡ ದ್ವಿತೀಯಾರ್ಧದಲ್ಲಿ ಅಪೂರ್ವ ಪೈಪೋಟಿ ನೀಡಿತು. ಒಗ್ಗಟ್ಟಿನ ಆಟ ಆಡಿದ ಈ ತಂಡ ಆರಂಭದಿಂದಲೇ ಟ್ಯಾಕಲ್ ಹಾಗೂ ರೈಡಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರಿತು.
ಸುರ್ಜಿತ್ ಸಿಂಗ್ ಆರು ಪಾಯಿಂಟ್ಸ್ ಗಳಿಸಿದರೆ, ಮನಿಂದರ್ ಸಿಂಗ್ ಒಂಬತ್ತು ಪಾಯಿಂಟ್ಸ್ಗಳಿಂದ ತಂಡದ ಬಲ ಹೆಚ್ಚಿಸಿದರು. ರೇಡಿಂಗ್ನಲ್ಲಿ ಮನಿಂದರ್ ಆರು ಪಾಯಿಂಟ್ಸ್ ತಂದರು. ಮೂರು ಬೋನಸ್ ಪಾಯಿಂಟ್ಸ್ ಕಲೆಹಾಕಿದರು. ವಾರಿಯರ್ಸ್ ‘ಬಿ’ ಗುಂಪಿನಲ್ಲೇ ಎರಡನೇ ಸ್ಥಾನದಲ್ಲಿದೆ.