ಲಕ್ಕುಂಡಿ (ಗದಗ ತಾ.): ಗ್ರಾಮದಲ್ಲಿ ದಂಡಿನ ದುರ್ಗಾದೇವಿಯ ದಸರಾ ಮಹೋತ್ಸವದ ಮೆರವಣಿಗೆ ಸಡಗರ ಸಂಭ್ರಮದಿಂದ ನಡೆಯಿತು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ದಂಡಿನ ದುರ್ಗಾದೇವಿಯ ದೇವಸ್ಥಾನದಿಂದ ಹೊರಟ ಮೆರವಣಿಗೆಗೆ ಹರ್ಲಾಪೂರ ಕೊಟ್ಟೂರೇಶ್ವರ ಸ್ವಾಮೀಜಿ ಚಾಲನೆ ನೀಡಿದರು.
ವಿದ್ಯುತ್ ಬಲ್ಬಗಳ ಬೆಳಕು ಮತ್ತು ವಿವಿಧ ಹೂವುಗಳಿಂದ ಅಲಂಕಾರಗೊಂಡಿದ್ದ ದೇವಿಯ ಮೂರ್ತಿಯನ್ನು ಗ್ರಾಮದ ರಾಜ ಬೀದಿಯಲ್ಲಿ ವೈಭವದಿಂದ ಮೆರವಣಿಗೆ ಸಾಗಿತು. ಯುವಕರ ಜಾಂಜ್ ಮೇಳ ಮತ್ತು ಯುವತಿಯರ ಡೊಳ್ಳು ಕುಣಿತ ನೆರೆದಿದ್ದ ಜನರ ಗಮನಸೆಳೆಯಿತು.
ಮೆರವಣಿಯಲ್ಲಿ ನಾಡಿನ ವಿವಿಧ ದೇವತೆಗಳ ವೇಷ ಧರಿಸಿದ ಬಾಲಕಿಯರು ಹಾಗೂ ಮೈಲಾರ ದೇವರ ಭಕ್ತರ ಬಾರಕೋಲಿನಿಂದ ಹೊಡೆದುಕೊಳ್ಳುವ ದೃಶ್ಯ ಮತ್ತು ನೃತ್ಯ ರೋಮಾಂಚನವಾಗಿತ್ತು.
ಮೆರವಣಿಗೆ ಕಲ್ಮಠವನ್ನು ತಲುಪಿದ ನಂತರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಕಳೆದ 10 ದಿನಗಳಿಂದ ನಡೆದ ದೇವಿ ಪುರಾಣವನ್ನು ವೀರೇಶ್ವರ ದೇವರು ಮುಕ್ತಾಯಗೊಳಿಸಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.