ನೆಲಮಂಗಲ: ವಿಜಯದಶಮಿ ಅಂಗವಾಗಿ ತಾಲ್ಲೂಕಿನ ಬಸವನಹಳ್ಳಿಯ (ವೃಷಭಾಪುರಿ) ಜಂಬೂಸವಾರಿ ದಿಣ್ಣೆಯಲ್ಲಿ ತಹಶೀಲ್ದಾರ್ ರಮೇಶ್ ಅವರು ಬನ್ನಿಮರದ ಕೊಂಬೆಗೆ ವಿಶೇಷ ಪೂಜೆ ನೆರವೇರಿಸಿದರು.
ಪೂಜೆ ಬಳಿಕ ಬನ್ನಿಮರದ ಕೊಂಬೆಯನ್ನು ಕತ್ತರಿಸಿ ನೆರೆದಿದ್ದವರಿಗೆ ಹಂಚಲಾಯಿತು. ಬಸವನಹಳ್ಳಿ, ಮೈಲನಹಳ್ಳಿ, ಕಣೇಗೌಡನಹಳ್ಳಿಯ ಗ್ರಾಮದೇವರ ಮೂರ್ತಿಗಳ ಉತ್ಸವ ನಡೆಸಲಾಯಿತು. ನೂರಾರು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಕಾಡಿನಿಂದ ಮೊಲವನ್ನು ಹಿಡಿದು ತಂದು ಅದರ ಕಿವಿಗೆ ಚಿನ್ನದ ಓಲೆ ತೊಡಿಸಲಾಯಿತು. ಮತ್ತೆ ಮೊಲವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ಯುವಕರಿಗಾಗಿಯೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.