ಮುಂಬೈ: ‘ದಲಿತ ಯುವಕರೇ... ಉತ್ತಮ ಆಹಾರ ಮತ್ತು ವಿದೇಶಿ ರಮ್ ಬೇಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆ ಸೇರಿಕೊಳ್ಳಿ’... –ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೇಂದ್ರ ಸಚಿವ ಹಾಗೂ ಆರ್ಪಿಐ ಮುಖಂಡ ರಾಮ್ದಾಸ್ ಅಠಾವಳೆ.
ಪುಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆ ನೀಡಿದ ಅಠಾವಳೆ ಅವರು, ರಕ್ಷಣಾ ವಲಯದಲ್ಲಿ ದಲಿತರ ಮೀಸಲಾತಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.
‘ದಲಿತ ಯುವಕರ ಏಳಿಗೆಗಾಗಿ ಭಾರತೀಯ ಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯಲ್ಲಿ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಬೇಕು. ಏಕೆಂದರೆ ಇಡೀ ದಲಿತ ಸಮುದಾಯ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಲು ಹಾಗೂ ಹೋರಾಡಲು, ಕೊಡುಗೆ ನೀಡಲು ಸಿದ್ಧವಿರುತ್ತದೆ’ ಎಂದು ಹೇಳಿದ್ದಾರೆ.
ಅಠಾವಳೆ ಅವರ ಹೇಳಿಕೆಯನ್ನು ಖಂಡಿಸಿದ ಎನ್ಸಿಪಿ ವರಿಷ್ಠ ಶರದ್ ಪವಾರ್, ಅಠಾವಳೆ ಅವರು ಈ ಹೇಳಿಕೆ ಮೂಲಕ ತಮಗೆ ತಾವೇ ಅಪಮಾನ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
‘ನಮ್ಮ ಜನರಲ್ಲಿ ಭಾರತೀಯ ಸೇನೆಯ ಬಗ್ಗೆ ತಪ್ಪು ಕಲ್ಪನೆ ಇದೆ. ಭಾರತೀಯ ಸೇನೆ ಸೇರಿದರೆ ಸಾಯುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಹಲವಾರು ಮಂದಿ ರಸ್ತೆ ಅಪಘಾತ ಹಾಗೂ ಹೃದಯಾಘಾತದಿಂದಲೂ ಸಾಯುತ್ತಾರೆ. ಆದರೆ, ಜನರು ಭಾರತೀಯ ಸೇನೆ ಸೇರುವುದರಿಂದಲೇ ಪ್ರಾಣಕಳೆದುಕೊಳ್ಳುತ್ತಾರೆ ಎಂದು ಭಾವಿಸಿದ್ದಾರೆ. ಇದು ತಪ್ಪು ಪರಿಕಲ್ಪನೆ’ ಎಂದು ಅಠಾವಳೆ ಹೇಳಿದ್ದಾರೆ.