ಬೆಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ದವರು ತಮಿಳುನಾಡಿನ ಜೋಲಾರ್ ಪೇಟೆಯಲ್ಲಿ ನಡೆದ ಅಖಿಲ ಭಾರತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಲೀಗ್ ಮತ್ತು ಸೂಪರ್ ಲೀಗ್ ಮಾದರಿಗಳಲ್ಲಿ ನಡೆದ ಟೂರ್ನಿಯ ಎಲ್ಲಾ ಪಂದ್ಯಗಳಲ್ಲೂ ಆಳ್ವಾಸ್ ವನಿತೆಯರು ಪ್ರಾಬಲ್ಯ ಮೆರೆದರು.
ಲೀಗ್ ಹಂತದ ಪಂದ್ಯಗಳಲ್ಲಿ ವಿ.ಎಸ್.ಎ ಸಲೇಮ್ ಮತ್ತು ಪಲ್ಲಾವರಂ ತಂಡಗಳನ್ನು ನೇರ ಸೆಟ್ಗಳಿಂದ ಮಣಿಸಿದ್ದ ಆಳ್ವಾಸ್ ಆಟಗಾರ್ತಿಯರು, ಸೂಪರ್ ಲೀಗ್ ಹಂತದ ಮೊದಲ ಹೋರಾಟದಲ್ಲಿ ಆತಿಥೇಯ ಜೋಲಾರ್ಪೇಟೆ ತಂಡವನ್ನು 35–12, 35–17ರಿಂದ ಮಣಿಸಿದರು.
ಎರಡನೇ ಹಣಾಹಣಿಯಲ್ಲಿ 35–30, 35–21ರಲ್ಲಿ ಮೈಲಾಪುರದ ಲೇಡಿ ಶಿವಸ್ವಾಮಿ ಕ್ಲಬ್ ವಿರುದ್ಧ ಗೆದ್ದಿದ್ದ ಜಯಲಕ್ಷ್ಮಿ ಬಳಗ ನಂತರದ ಪೈಪೋಟಿಯಲ್ಲಿ 35–22, 35–14ರ ನೇರ ಸೆಟ್ಗಳಿಂದ ಚೆನ್ನೈನ ಎಸ್.ಆರ್.ಎಂ. ವಿಶ್ವವಿದ್ಯಾಲಯ ತಂಡವನ್ನು ಮಣಿಸಿತ್ತು.
ನಾಮಕ್ಕಲ್ನ ಪಾವೈ ತಂಡದ ಎದುರಿನ ಅಂತಿಮ ಸೂಪರ್ ಲೀಗ್ ಹೋರಾಟದಲ್ಲೂ ಆಳ್ವಾಸ್ ಆಟಗಾರ್ತಿಯರು ಆಧಿಪತ್ಯ ಸಾಧಿಸಿದರು. 35–21, 35–21ರಲ್ಲಿ ಎದುರಾಳಿಗಳ ಸವಾಲು ಮೀರಿ ನಿಂತು ಸತತ ಎರಡನೇ ಬಾರಿ ಕಿರೀಟ ಮುಡಿಗೇರಿಸಿಕೊಂಡರು.
ಟೂರ್ನಿಯಲ್ಲಿ ಶ್ರೇಷ್ಠ ಆಟ ಆಡಿದ ನಾಯಕಿ ಜಯಲಕ್ಷ್ಮಿ ತಂಡ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.