ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಸ್ವಾಮಿಗೆ ‘ಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ

Last Updated 2 ಅಕ್ಟೋಬರ್ 2017, 20:23 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು ಸೋಮವಾರ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

₹5 ಲಕ್ಷ ನಗದು ಒಳಗೊಂಡಿರುವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೊರೆಸ್ವಾಮಿ, ‘ಪ್ರಶಸ್ತಿಯ ಮೊತ್ತದಲ್ಲಿ ಹೋರಾಟ ಸಮಿತಿಗೆ ₹1 ಲಕ್ಷ ಮತ್ತು ಜಯದೇವ ಆಸ್ಪತ್ರೆಗೆ ₹1 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಪ್ರಕಟಿಸಿದರು.

‘ದೇಶದಲ್ಲಿ ಹಿಂಸೆ ಹೆಚ್ಚುತ್ತಿದೆ. ಈ ಹಿಂಸಾ ಪ್ರವೃತ್ತಿ ರಾಜಕೀಯ ಕ್ಷೇತ್ರಕ್ಕೂ ಪಸರಿಸುತ್ತಿದೆ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಘರ್ಷಣೆಗಳ ಹಿಂದೆ ರಾಜಕೀಯ ಪ್ರಚೋದನೆ ಇರುವುದನ್ನು ಕೇಳಿದ್ದೇನೆ. ಹಿಂಸಾ ಪ್ರವೃತ್ತಿ ಬೆಳೆಯಲು ಬಿಟ್ಟರೆ ಮುಂದೆ ಗೂಂಡಾಗಳು, ಪುಂಡರ ಕೈಗೆ ಅಧಿಕಾರ ಹೋಗುತ್ತದೆ. ಅದು ಮುಂದೆ ನಾಗರಿಕ ಯುದ್ಧಕ್ಕೂ ನಾಂದಿಯಾಗುತ್ತದೆ ಎನ್ನುವ ಆತಂಕ ಕಾಡುತ್ತಿದೆ’ ಎಂದು ಕಿವಿಮಾತು ಹೇಳಿದರು.

‘ನಾನೊಬ್ಬ ಸಾಮಾನ್ಯ ಕೆಲಸಗಾರ. ನಾನು ಕೆಟ್ಟವನಲ್ಲ, ಅಧಿಕಾರಸ್ಥರನ್ನೂ ಎದುರು ಹಾಕಿಕೊಂಡಿಲ್ಲ. ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ನನ್ನ ವಿಚಾರ ಮತ್ತು ಹೋರಾಟವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದೇ ಭಾವಿಸಿದ್ದೇನೆ. 70 ವರ್ಷಗಳಿಂದಲೂ ಬಡತನ ನಿರ್ಮೂಲನೆಗೆ ಎಲ್ಲ ಸರ್ಕಾರಗಳನ್ನು ಕೇಳಿಕೊಳ್ಳುತ್ತಿದ್ದೇನೆ. ಬಡವರು ಇನ್ನು ಎಷ್ಟು ವರ್ಷ ಬಡವರಾಗಿಯೇ ಇರಬೇಕು? ಗಾಂಧೀಜಿ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ’ ಎಂದು ಅವರು, ಮುಖ್ಯಮಂತ್ರಿಗೆ ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ‘ದೊರೆಸ್ವಾಮಿ ಅವರ ಗುರಿ ಮತ್ತು ಹೋರಾಟ ಸ್ವಲ್ವವೂ ಬದಲಾಗಿಲ್ಲ. ನಮ್ಮ ಸರ್ಕಾರದ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಾರೆ. ಅದನ್ನು ಉದ್ದೇಶ ಪೂರ್ವಕ ಟೀಕೆಗಳೆಂದು ಭಾವಿಸಿಲ್ಲ. ಅವರು ನಮಗೆ ನೀಡುವ ಮಾರ್ಗದರ್ಶನವೆಂದೇ ಭಾವಿಸಿದ್ದೇವೆ’ ಎಂದರು.

‍‌ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅವರು ಮಾತನಾಡಿ, ‘ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟ ನಡೆಸಿರುವ ದೊರೆಸ್ವಾಮಿ ಅವರಿಗೆ ಈ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ಎರಡೇ ನಿಮಿಷಗಳಲ್ಲಿ ನಿರ್ಧಾರ ತೆಗೆದುಕೊಂಡಿತು’ ಎಂದು ಹೇಳಿದರು.

ಗಾಂಧೀಜಿಯವರ ಆಶಯದಂತೆ ಅಸ್ಪೃಶ್ಯತೆ ತೊಲಗಿಸಲು ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಗಾಂಧೀಜಿ ಮತ್ತು ದೊರೆಸ್ವಾಮಿ ಅವರ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಎಚ್‌.ಎಸ್‌.ದೊರೆಸ್ವಾಮಿ ಅವರು ಇಂದು ಬರೀ ವ್ಯಕ್ತಿಯಾಗಿ ಉಳಿದಿಲ್ಲ, ಸಮಾಜದ ಶಕ್ತಿ ಹಾಗೂ ಚಳವಳಿಯಾಗಿದ್ದಾರೆ.
–ಎಚ್‌.ಎನ್‌.ನಾಗಮೋಹನ್‌ ದಾಸ್, ‍‌ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT