ಚಾಮರಾಜನಗರ: ‘ರಾಜ್ಯದಲ್ಲಿ ವೀರಶೈವ ಮಠಗಳು ಯಾವುದೇ ಜಾತಿ, ಮತ ಭೇದವಿಲ್ಲದೆ ಸಕಲ ಸಮುದಾಯದವರನ್ನು ‘ಇವ ನಮ್ಮವ’ ಎಂಬ ತತ್ವದಡಿ ಕಾಣುವ ಮೂಲಕ ಸಮಾಜದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮರಿಯಾಲ ಮುರುಘ ರಾಜೇಂದ್ರಸ್ವಾಮಿ ಮಠದಲ್ಲಿ ಸೋಮವಾರ ನಡೆದ ಮಹಾಂತ ಸ್ವಾಮೀಜಿ ಅವರ ಸಂಸ್ಮರಣ ಮಹೋತ್ಸವದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮಠಗಳು ದೇಶದ ಪ್ರಬಲ ಸಾಂಸ್ಕೃತಿಕ ಪರಂಪರೆ ಹಾಗೂ ಧಾರ್ಮಿಕ ಕೊಡುಗೆಯನ್ನು ಪ್ರಪಂಚಕ್ಕೆ ನೀಡುವ ಜತೆಗೆ, ಪ್ರೀತಿ, ವಿಶ್ವಾಸ, ಸಮನ್ವಯತೆ ಹಾಗೂ ಶಾಂತಿಯನ್ನು ಸಾರುತ್ತಿವೆ ಎಂದರು.
ಪಿರಿಯಾಪಟ್ಟಣದ ಸಲೀಲಾಖ್ಯ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಮಂತಿಕೆ ಯಿಂದ ದೇಶದ ಅಭಿವೃದ್ಧಿಯನ್ನು, ಆಹಾರ ನೀಡುವುದರಿಂದ ನಾಗರಿಕತೆ ಯನ್ನು ಅಳೆಯಲು ಸಾಧ್ಯವಿಲ್ಲ. ಪ್ರಪಂಚಕ್ಕೆ ಎಷ್ಟು ಮಹಾನ್ ವ್ಯಕ್ತಿಗಳನ್ನು ನೀಡಿದೆ ಎನ್ನುವುದು ಮುಖ್ಯ ಎಂದು ಹೇಳಿದರು.