ದಾವಣಗೆರೆ: ಈ ಶಾಲೆಯಲ್ಲಿ ಶೌಚಾಲಯಗಳಿಲ್ಲ, ಮಳೆ ಬಂದರೆ ಪಾಠ ಕೇಳುವ ಕಟ್ಟಡ ಸೋರುವ, ಕುಸಿಯುವ ಭಯ 7ನೇ ತರಗತಿ ವಿದ್ಯಾರ್ಥಿಗಳಿಗೆ ತಪ್ಪಿಲ್ಲ.
ಇದು ಹೊನ್ನಾಳಿ ತಾಲ್ಲೂಕಿನ ಕೆಂಗಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಿತ್ಯ ಎದುರಿಸುತ್ತಿರುವ ದುಸ್ಥಿತಿ.
ಸರ್ಕಾರಿ ಶಾಲೆಯಲ್ಲಿ ತಪ್ಪದ ಬವಣೆ: ಆತಂಕದಲ್ಲಿ ವಿದ್ಯಾರ್ಥಿಗಳುಕೇವಲ ಐದಾರು ಅಡಿಗಿಂತ ಕಡಿಮೆ ಎತ್ತರದ ಗೋಡೆಗಳಿಂದ ಚಾವಣಿಯಿಲ್ಲದೆ ನಿರ್ಮಿಸಿರುವ ಸ್ಥಳದಲ್ಲೇ ಶಾಲೆಯ ಮಕ್ಕಳು ಮೂತ್ರ ವಿಸರ್ಜನೆ ಮಾಡಬೇಕಿದೆ. ಶೌಚಕ್ಕಾಗಿ ಮನೆ ಇಲ್ಲವೇ ಬಯಲಿಗೆ ಹೋಗುವಂತಹ ಪರಿಸ್ಥಿತಿ ಉಲ್ಬಣವಾಗಿದೆ.
ಭೀತಿಯಲ್ಲಿ ವಿದ್ಯಾರ್ಥಿಗಳು: ಈ ಶಾಲೆಯಲ್ಲಿ 7ನೇ ತರಗತಿ ಮಕ್ಕಳು ಪಾಠ ಕೇಳುವ ಕೊಠಡಿಯ ಚಾವಣಿ ಸಂಪೂರ್ಣ ಶಿಥಿಲಗೊಂಡಿದೆ. ದುರಸ್ತಿ ಮಾಡುವುದಕ್ಕೂ ಯೋಗ್ಯವಿಲ್ಲದಂತಾಗಿದೆ. ಯಾವಾಗ ಬೇಕಾದರೂ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಈ ನಡುವೆ ಮಕ್ಕಳು ಪ್ರಾಣಭಯ ಎದುರಿಸುತ್ತಾ ಪಾಠ ಕೇಳುವ ಸ್ಥಿತಿ ತಪ್ಪದಂತಾಗಿದೆ.
ಮಳೆ ನೀರಲ್ಲೇ ಪಾಠ: ಮಳೆ ಒಮ್ಮೆ ಜೋರಾಗಿ ಬಂದರೆ ಸಾಕು, ಬೋಧನಾ ಕೊಠಡಿಯೊಳಗೆ ನೀರು ಸಂಗ್ರಹವಾಗುತ್ತದೆ. ಕೊಠಡಿಯೊಳಗಿನ ಮಕ್ಕಳ ಪಠ್ಯಪುಸ್ತಕ, ಬೆಂಚುಗಳ ಮೇಲೆ ಹನಿ ಹನಿಯಾಗಿ ಮಳೆನೀರು ಸುರಿಯುತ್ತದೆ. ಇದರಿಂದ ವಿದ್ಯಾರ್ಥಿಗಳು ನಿತ್ಯ ಆಂತಂಕ ಎದುರಿಸುವಂತಾಗಿದೆ.
ಶಿಕ್ಷಕರ ಒತ್ತಾಯ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲೆಗೆ ಹೈಟೆಕ್ ಶೌಚಾಲಯ ನಿರ್ಮಿಸಿ ಕೊಡುವಂತೆ ಜಿಲ್ಲಾ ಪಂಚಾಯ್ತಿ ನೋಡಲ್ ಅಧಿಕಾರಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಶಾಲಾ ಕೊಠಡಿ ದುರಸ್ತಿಗಾಗಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅಧಿಕಾರಿಗಳು ಶಾಲೆಗೆ ಮೂಲಸೌಲಭ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಿ’ ಎನ್ನುವುದು ಇಲ್ಲಿನ ಶಿಕ್ಷಕರ ಒತ್ತಾಯ.