ಜಮ್ಮು/ಇಸ್ಲಾಮಾಬಾದ್ : ಪಾಕಿಸ್ತಾನ ಸೇನೆ ಸತತ ಮೂರನೇ ದಿನವಾದ ಬುಧವಾರವೂ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ನಡೆಸಿದ ಅಪ್ರಚೋದಿತ ಗುಂಡು ಮತ್ತು ಶೆಲ್ ದಾಳಿಯಲ್ಲಿ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಗುಂಡಿನ ದಾಳಿ ನಡೆಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಇಬ್ಬರು ನಾಗರಿಕರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ವಾರದಲ್ಲಿ ಎರಡನೇ ಬಾರಿ ಪಾಕಿಸ್ತಾನದಲ್ಲಿರುವ ಭಾರತೀಯ ಡೆಪ್ಯೂಟಿ ಹೈಕಮಿಷನರ್ ಜೆ.ಪಿ. ಸಿಂಗ್ ಅವರನ್ನು ಕರೆಸಿಕೊಂಡ ಪಾಕಿಸ್ತಾನದ ಸರ್ಕಾರ ತನ್ನ ಪ್ರತಿಭಟನೆ ದಾಖಲಿಸಿದೆ. ಭಾರತ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.
ಪಾಕಿಸ್ತಾನ ಮಂಗಳವಾರ ನಡೆಸಿದ ದಾಳಿಯಲ್ಲಿ ಭಾರತೀಯ ಯೋಧರೊಬ್ಬರು ಮೃತಪಟ್ಟಿದ್ದರು. ಅ.2ರಂದು ಇಬ್ಬರು ಬಾಲಕರು ಮೃತಪಟ್ಟು, 12 ನಾಗರಿಕರು ಗಾಯಗೊಂಡಿದ್ದರು.