ಸವಣೂರ: ‘ಅತಿವೃಷ್ಟಿ ಹಾಗೂ ಅನಾವೃಷ್ಟಿಯನ್ನು ತಡೆಯಲು ನದಿಗಳ ಜೋಡಣೆ ಸಹಕಾರಿ’ ಎಂದು ಕಲ್ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.
ವಿವಿಧ ಸಂಘಟನೆಗಳು ಆಯೋಜಿಸಿದ ‘ರ್ಯಾಲಿ ಫಾರ್ ರಿವರ್್ಸ್’ ಅಭಿಯಾನ ಹಾಗೂ ಜನಜಾಗೃತಿ ಜಾಥಾಕ್ಕೆ ಸೋಮವಾರ ಪಟ್ಟಣದ ಭರಮಲಿಂಗೇಶ್ವರ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
‘ಪರಿಸರ ರಕ್ಷಣೆ ಕುರಿತು ಯುವಜನತೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಬೇಕು’ ಎಂದರು.
‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ವರದಾ ನದಿ ಈಗ ಮೈತುಂಬಿ ಹರಿಯುತ್ತಿದೆ. ಆದರೆ, ಬೇಸಿಗೆಯಲ್ಲಿ ಬರಿದಾಗುವ ಮೂಲಕ ಕುಡಿಯುವ ನೀರಿಗಾಗಿ ನದಿ ದಡದ ಗ್ರಾಮಗಳ ಜನರು ಪರದಾಡುವ ಸ್ಥಿತಿ ಎದುರಾಗುತ್ತಿದೆ. ಆದ್ದರಿಂದ, ನದಿಗಳ ರಕ್ಷಣೆಯೊಂದಿಗೆ ನದಿಗಳ ಜೋಡಣೆ ಸರ್ಕಾರಗಳು ಮುಂದಾಗಬೇಕು’ ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಯಿತು. ನಿವೃತ್ತ ಪ್ರಾಚಾರ್ಯ ವೈ.ವಿ.ಯತ್ನಳ್ಳಿ, ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಪರಶುರಾಮ ಈಳಗೇರ, ನವೀನಗೌಡ ಪಾಟೀಲ, ಪ್ರಶಾಂತ ನಾವಳ್ಳಿ, ಪ್ರವೀಣ ಅರ್ಕಸಾಲಿ ಇದ್ದರು.