ರಾಣೆಬೆನ್ನೂರು: ತಾಲ್ಲೂಕಿನ ಹಲಗೇರಿ ಬಳಿ ಭಾನುವಾರ ರಾತ್ರಿ ಸಂಭವಿಸಿದ ಲಾರಿ– ಟ್ರ್ಯಾಕ್ಸ್ ಡಿಕ್ಕಿಯಲ್ಲಿ ಮಾಕನೂರಿನ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಮನೆಯ ಮೊಮ್ಮಗ ವಿಷ್ಣು ಹುಟ್ಟು ಹಬ್ಬದ ಸಂಭ್ರದಲ್ಲಿ ಇರಬೇಕಾದ ಮನೆಯಲ್ಲಿ ಆಕ್ರಂದನ ಮಡುಗಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಸಿಗಂಧೂರಿನಿಂದ ದೇವರ ದರ್ಶನ ಮುಗಿಸಿಕೊಂಡು ಇನ್ನೇನು ಅರ್ಧ ಗಂಟೆಯಲ್ಲಿ ಮನೆ ಸೇರಲಿದ್ದೇವೆ ಎಂಬ ಸಂತಸದ ನಡುವೆಯೇ, ಹಲಗೇರಿಯಲ್ಲಿ ಅವಘಡ ಸಂಭವಿಸಿತ್ತು.
ಮಾಕನೂರಿನ ಒಂದೇ ಕುಟುಂಬದ ನಾಗಮ್ಮ ಜಯಪ್ಪ ಭಂಡಾರಿ (48), ಪೂರ್ಣಿಮಾ ಮಂಜುನಾಥ ಭಂಡಾರಿ (25) ಮತ್ತು ಸರ್ವಕ್ಕ ಮಲ್ಲಪ್ಪ ಭಂಡಾರಿ (58) ಸೇರಿದಂತೆ 6 ಮಂದಿ ಮೃತಪಟ್ಟಿದ್ದರು.
‘ಘಟನೆಯಲ್ಲಿ ಸಾವನ್ನಪ್ಪಿದ ಪೂರ್ಣಿಮಾ ಮತ್ತು ಗಾಯಾಳು ಮಂಜುನಾಥ ಭಂಡಾರಿ ಮಗ ವಿಷ್ಣುವಿನ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬ ಆಚರಿಸಲು ಸಿಗಂಧೂರಿಗೆ ಹೋಗಿದ್ದರು’ ಎನ್ನುತ್ತಾರೆ ಮಾಕನೂರಿನ ರೈತ ಮುಖಂಡ ಈರಣ್ಣ ಹಲಗೇರಿ.
‘3 ವರ್ಷದ ಮಗು ವಿಷ್ಣು ತಾಯಿ ಮತ್ತು ಅಜ್ಜಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾನೆ. ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗ ಸಂಬಂಧಿಕರೇ ತಂದೆ –ತಾಯಿ. ಮಗು ಅಳುವುದನ್ನು ಕಂಡರೆ ದು:ಖ ಉಮ್ಮಳಿಸಿ ಬರುತ್ತಿದೆ’ ಎನ್ನುತ್ತಾರೆ ಅವರು.
ಗಾಯಗೊಂಡ ಮಾಕನೂರಿನ ಮಂಜುನಾಥ ಜಯಪ್ಪ ಭಂಡಾರಿ, ಭರಮಸಾಗರದ ಗುರುಸಿದ್ದಪ್ಪ ಟಿಜೆ, ಕೋಡಿಯಾಲ ಹೊಸಪೇಟೆಯ ತಿಪ್ಪಕ್ಕ ಹಾಲೇಶಪ್ಪ ನೀಲಗುಂದ, ಇಟಗಿಯ ಚನಬಸಪ್ಪ ಬಸಪ್ಪ ಆನ್ವೇರಿ, ಚಾಲಕ ಮಾಕನೂರಿನ ರಮೇಶ ಸಿದ್ದಪ್ಪ ಹುಲಗೆಪ್ಪನವರ ಅವರು ಇಲ್ಲಿನ ಓಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.