ಬ್ಯಾಡಗಿ: ತಾಲ್ಲೂಕಿನಾದ್ಯಂತ ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು ಹಿಂಗಾರು ಬಿತ್ತನೆಗೆ ರೈತರು ಸನ್ನದ್ಧರಾಗಿದ್ದಾರೆ. ಗೋವಿನ ಜೋಳ ಬೆಳೆಯು ದೀಪಾವಳಿ ಹಬ್ಬದ ಬಳಿಕ ಕಟಾವು ನಡೆಯಲಿದೆ. ಆ ಬಳಿಕ ಹಿಂಗಾರು ಬಿತ್ತನೆಗೆ ಜಮೀನನ್ನು ಸಿದ್ಧಗೊಳಿಸಿ ಬಿತ್ತನೆ ಪ್ರಾರಂಭಿಸಲಾಗುವುದು.
ಕಳೆದ ತಿಂಗಳು ವಾಡಿಕೆಯಂತೆ ಬ್ಯಾಡಗಿ ತಾಲ್ಲೂಕಿನಲ್ಲಿ 99 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, ಸರಾಸರಿ 185.4ಮಿ.ಮೀ ಮಳೆ ಸುರಿದಿದೆ. ಬ್ಯಾಡಗಿ ಪಟ್ಟಣದಲ್ಲಿ 244ಮಿ.ಮೀ., ಹೆಡಿಗ್ಗೊಂಡದಲ್ಲಿ 233ಮಿ.ಮೀ. ಹಾಗೂ ಕಾಗಿನೆಲೆಯಲ್ಲಿ 77ಮಿ.ಮೀ. ಮಳೆ ದಾಖಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಈ ತನಕ ಸರಾಸರಿ 53.3ಮಿ.ಮೀ ಮಳೆ ಸುರಿದಿದೆ. ಬ್ಯಾಡಗಿ 28.4 ಮಿ.ಮೀ., ಕಾಗಿನೆಲೆಯಲ್ಲಿ 41.2 ಮಿ.ಮೀ. ಹಾಗೂ ಹೆಡಿಗ್ಗೊಂಡದಲ್ಲಿ 90.4 ಮಿ.ಮೀ. ಮಳೆಯಾಗಿದೆ.
ಬೆಳೆ ವಿಮೆ ಪರಿಹಾರ: ‘ಕಳೆದ ಸಾಲಿನಲ್ಲಿ ತಾಲ್ಲೂಕಿಗೆ ₹18 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದ್ದು, ಅದರಲ್ಲಿ ಶೇ 80 ರಷ್ಟು ಪರಿಹಾರದ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇನ್ನುಳಿದ ಶೇ 20ರಷ್ಟು ಹಣವನ್ನು ಹಂತ ಹಂತವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು‘ ಎಂದು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.