ಬಾದಾಮಿ: ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಸೋಮವಾರ ಗುಡುಗು ಸಿಡಿಲಿನ ಆರ್ಭಟ ಸಹಿತ ಒಂದು ಗಂಟೆ ಕಾಲ ಧಾರಾಕಾರ ಮಳೆ ಸುರಿಯಿತು. ಪೂರ್ವದ ಬೆಟ್ಟದ ಮೇಲಿಂದ ಜೋಡಿ ಜಲಪಾತಗಳು ಅಗಸ್ತ್ಯತೀರ್ಥ ಹೊಂಡಕ್ಕೆ ಧುಮ್ಮಿಕ್ಕಿದವು.ಜೋಡಿ ಜಲಪಾತದಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ಒಂದು ಅಡಿಯಷ್ಟು ನೀರು ಸಂಗ್ರಹವಾಯಿತು.
ಪ್ರವಾಸಿಗರು, ನವಜೋಡಿಗಳು, ಪ್ರೇಮಿಗಳು, ಸ್ನೇಹಿತರು , ಯುವಕರು, ಮಹಿಳೆಯರು, ಮಕ್ಕಳು ಮತ್ತು ನಿಸರ್ಗ ಪ್ರಿಯರು ಜೋಡಿ ಜಲಪಾತವನ್ನು ವೀಕ್ಷಿಸಿ ಸಂತಸಪಟ್ಟರು. ಕೆಲವು ಯುವಕರು ಜಲಪಾತ ಬೀಳುವ ಬೆಟ್ಟದ ಮೇಲೆ ಹೋಗಿ ವೀಕ್ಷಿಸಿದರು.
ಮಧ್ಯಾಹ್ನ ಸಮಯದಲ್ಲಿ ಮಳೆ ಸುರಿದ ಕಾರಣ ನಿಸರ್ಗ ಪ್ರಿಯರು ಖುಷಿ ಪಟ್ಟರು. ಕೆಲವರು ಸೆಲ್ಫಿ ತೆಗೆದುಕೊಂಡು ಫೇಸ್ಬುಕ್ ಮತ್ತು ವಾಟ್ಸಾಪ್ಗೆ ಕಳುಹಿಸಿದರು.
ಮಳೆಯಿಂದ ಪಟ್ಟಣದಲ್ಲಿ ರಸ್ತೆ ಮತ್ತು ಚರಂಡಿಯ ಕೊಳೆಯೆಲ್ಲ ಸ್ವಚ್ಛವಾಯಿತು. ಆದರೆ ಕೆಶಿಪ್ ರಸ್ತೆ ಕಾಮಗಾರಿಯಿಂದ ಮುಖ್ಯ ರಸ್ತೆ ರಜ್ಜಿನಿಂದ ಕೂಡಿತ್ತು.
ಸೋಮವಾರ ಸಂತೆಯ ದಿನವಾಗಿದ್ದರಿಂದ ವರ್ತಕರು ಮತ್ತು ಗ್ರಾಹಕರು ಮಳೆಯ ನೀರಿನಿಂದ ಪರದಾಡಿದರು. ತರಕಾರಿ ನೀರಿನಲ್ಲಿ ಕೊಚ್ಚಿಹೋದವು. ಮಳೆಯಿಂದ ಹರ್ಷರಾದ ರೈತರು ಸೋಮವಾರದ ಮಳೆಗೆ ‘ಮಳೆ ಸಂತೆಯ ಸೋದರಮಾವ’ ಎಂದು ಬಣ್ಣಿಸಿದರು.