ಹಾಸನ: ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ವಾರದ ಹಿಂದೆ ಕೆ.ಜಿ. ₹ 25 ಇದ್ದದ್ದು, ಈಗ ₹ 30 ರಂತೆ ಮಾರಾಟವಾಗುತ್ತಿದೆ. ವಿವಿಧ ಪ್ರದೇಶಗಳಿಂದ ಮಾರುಕಟ್ಟೆಗೆ ಈರುಳ್ಳಿ ಕಡಿಮೆ ಪ್ರಮಾಣದಲ್ಲಿ ಬರುತ್ತಿರುವ ಕಾರಣ ಏಕಾಏಕಿ ₹ 5 ಏರಿಕೆ ಆಗಿದೆ.
‘ಜಿಲ್ಲೆಗೆ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆವಕ ಆಗುತ್ತದೆ. ಕೆಲ ದಿನಗಳಿಂದ ಉತ್ತರ ಭಾರತದಲ್ಲಿ ಮಳೆ ಪ್ರಮಾಣ ಹೆಚ್ಚಾದ ಕಾರಣ ಸಾಕಷ್ಟು ಬೆಳೆ ನಾಶವಾಗಿದೆ. ಈ ಕಾರಣದಿಂದ ಮಾರುಕಟ್ಟೆಗೆ ಬರುವ ಈರುಳ್ಳಿ ಕಡಿಮೆ ಆಗಿದೆ’ ಎಂದು ವ್ಯಾಪಾರಿ ಹರ್ಷ ತಿಳಿಸಿದರು.
ಹಣ್ಣುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಕೆ.ಜಿ ಸೇಬು ₹ 100, ಡಜನ್ ಬಾಳೆಹಣ್ಣು ₹ 40, ಕಿತ್ತಳೆ ಹಣ್ಣು ಕೆ.ಜಿ. ಗೆ ₹ 80, ದಾಳಿಂಬೆ ₹ 70, ಮೂಸಂಬಿ ₹ 60, ದ್ರಾಕ್ಷಿ ₹120ಕ್ಕೆ ಮಾರಾಟವಾಗುತ್ತಿದೆ. ಹುರುಳಿ ಕಾಯಿ ಕೆ.ಜಿ.ಗೆ ₹ 60, ಆಲೂಗೆಡ್ಡೆ ₹ 20 ಹಾಗೂ ಟೊಮೆಟೊ ₹ 15 ರಂತೆ ಲಭ್ಯ ಇದೆ.
ಹಾಗೆಯೇ ಕೊತ್ತಂಬರಿ ₹10, ಪಾಲಾಕ್, ಲಾಳಿ ಮತ್ತು ದಂಟು ಸೊಪ್ಪು ಕಂತೆಗೆ ₹ 5 ರಿಂದ ₹ 6 ರಂತೆ ಮಾರಾಟವಾಗುತ್ತಿದ್ದು, ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಪರಿಣಾಮ ತರಕಾರಿ ಬೆಲೆಯಲ್ಲಿ ಅಂತಹ ಏರಿಕೆ ಕಂಡು ಬಂದಿಲ್ಲ.