ಚುನಾವಣೆ ವಿಜಯೋತ್ಸವ, ಜಾತ್ರೆ, ಮದುವೆ ಹಾಗೂ ಮೆರವಣಿಗೆಗಳಲ್ಲಿ ಪಟಾಕಿ ಸಿಡಿಸುವುದು, ಡಿ.ಜೆ.ಗಳ ಬಳಕೆ ಪ್ರತಿಷ್ಠೆಯ ರೂಪ ತಾಳಿದ್ದು, ಕೆಲವು ಹೊಣೆಗೇಡಿಗಳು ಇವುಗಳನ್ನು ಮಿತಿಮೀರಿ ಬಳಸುವುದರಿಂದ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದಕ್ಕೂ ಸಂಚಕಾರ ಬಂದಿದೆ.
ನಗರ ಪ್ರದೇಶಗಳಲ್ಲಿ ದಿಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದನ್ನು ಸುಪ್ರಿಂ ಕೋರ್ಟ್ ನಿಷೇಧಿಸಿರುವುದು ನಿಜಕ್ಕೂ ಸ್ವಾಗತಾರ್ಹ (ಪ್ರ.ವಾ., ಅ.10). ದೀಪಾವಳಿ ಹಬ್ಬದಂದು ಪಟಾಕಿಗಳನ್ನು ಸಿಡಿಸುವುದರಿಂದ ಬಿಡುಗಡೆಯಾಗುವ ರಾಸಾಯನಿಕಗಳಿಂದ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಉಂಟಾಗಿ ಮಾನವ ಮಾತ್ರವಲ್ಲ ಪ್ರಾಣಿ -ಪಕ್ಷಿಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪಟಾಕಿಗಳ ಕಿವಿಗಡಚಿಕ್ಕುವ ಶಬ್ದಕ್ಕೆ ಹೆದರಿ ಪ್ರಾಣಿ– ಪಕ್ಷಿಗಳು ತಮ್ಮ ನೆಲೆಯನ್ನು ಬಿಟ್ಟು ದಿಕ್ಕಾಪಾಲಾಗುತ್ತವೆ. ಶಾಂತಿ, ನೆಮ್ಮದಿ ಬಯಸುವ ಜನರಿಗೆ ಪಟಾಕಿಗಳು ಇನ್ನಿಲ್ಲದ ಕಿರಿಕಿರಿಯನ್ನು ಉಂಟುಮಾಡುತ್ತವೆ. ಪಟಾಕಿ ಸಿಡಿಸಲು ಹೋಗಿ ಅದೆಷ್ಟೋ ಮಕ್ಕಳು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ.
ದೀಪಾವಳಿ ದೀಪಗಳ ಹಬ್ಬ ಆಗಬೇಕೇ ಹೊರತು ಶಬ್ದದ ಹಬ್ಬ ಆಗಬಾರದು. ಪಟಾಕಿ ನಿಷೇಧ ದೆಹಲಿಗೆ ಮಾತ್ರ ಸೀಮಿತವಾಗದೇ ದೇಶದ ಎಲ್ಲಾ ಭಾಗಗಳಿಗೂ ಅನ್ವಯಿಸಬೇಕು.