ಬೆಂಗಳೂರು: ‘ಲೀ–ಮೆರಿಡಿಯನ್ ಹೋಟೆಲ್ ಸಮೀಪದ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ತಡೆಯಲು ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮೇಯರ್ ಆರ್.ಸಂಪತ್ ರಾಜ್ ಹೇಳಿದರು.
ನಗರದ ಬಸವೇಶ್ವರ ವೃತ್ತದ ಬಳಿ ತಪಾಸಣೆ ನಡೆಸಿದ ಬಳಿಕ ಅವರು ಮಾತನಾಡಿದರು.
‘ಈ ಕೆಳಸೇತುವೆಯಲ್ಲಿ ಮಳೆಯ ನೀರು ಸಂಗ್ರಹಗೊಂಡಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಈ ಭಾಗದ ವಾಹನ ಸವಾರರಿಗೆ ಸಮಸ್ಯೆ ಉಂಟಾಗಿದೆ. ನೀರನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.
‘ಮೇಖ್ರಿ ವೃತ್ತದ ಬಳಿ ಇರುವ ವಾಯುಪಡೆಯ ತರಬೇತಿ ಸಂಸ್ಥೆಯ ಆವರಣದಲ್ಲಿ ಬಿದ್ದ ಮಳೆ ನೀರು ಬಳ್ಳಾರಿ ರಸ್ತೆ ಕಡೆಗೆ ಹರಿಯುತ್ತಿದೆ. ಇಲ್ಲಿ ಬೃಹತ್ ರಾಜಕಾಲುವೆ ನಿರ್ಮಿಸುವುದರಿಂದ ರಸ್ತೆಗೆ ನೀರು ಹರಿಯುವುದನ್ನು ತಡೆಗಟ್ಟಬಹುದು. ವಾಯುಪಡೆಯವರು ಒಪ್ಪಿಗೆ ಪತ್ರ ನೀಡಿದರೆ ಕೂಡಲೇ ಕಾಲುವೆ ನಿರ್ಮಿಸುತ್ತೇವೆ’ ಎಂದು ತಿಳಿಸಿದರು.
‘ಈ ಸಂಸ್ಥೆಯು 200 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ಇಲ್ಲಿ ಇಂಗು ಗುಂಡಿ ಹಾಗೂ ಕೊಳಚೆನೀರು ಶುದ್ಧೀಕರಣ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಈ ಕುರಿತು ಸಂಸ್ಥೆಯ ಮುಖ್ಯಸ್ಥ ಜಿ.ಅನಂತ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದರು.