ದಾವಣಗೆರೆ: ಕೈಗಾರಿಕಾ ಪ್ರದೇಶಕ್ಕೆ ಜಾಗ ಸ್ವಾಧೀನ ಪಡಿಸಿಕೊಂಡು ರೈತರಿಗೆ ನ್ಯಾಯಯುತ ಪರಿಹಾರ ನೀಡದ ಪ್ರಕರಣದಲ್ಲಿ ನಗರದ ಹೊರವಲಯದ ಕರೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ನ್ಯಾಯಾಲಯದ ಆದೇಶದಂತೆ ಅಮೀನರು ಬುಧವಾರ ಜಪ್ತಿ ಮಾಡಿದರು.
ಜಾಗ ಸ್ವಾಧೀನ ಪಡೆದುಕೊಂಡ ಬಳಿಕ ಮಾಲೀಕನಿಗೆ ಪರಿಹಾರವನ್ನು ವಿಶೇಷ ಭೂಸ್ವಾಧೀನ ಇಲಾಖೆ ನೀಡಿರಲಿಲ್ಲ. ಇದರ ವಿರುದ್ಧ ಮಾಲೀಕ ಕೃಷ್ಣೋಜಿರಾವ್ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ಒಂದು ಅಡಿ ಜಾಗಕ್ಕೆ ₹ 9 ಪರಿಹಾರ ನಿಗದಿಪಡಿಸಿತ್ತು. ಇದನ್ನು ಕೃಷ್ಣೋಜಿರಾವ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಜಾಗದ ಮಾಲೀಕರಿಗೆ ಅಡಿಗೆ ₹ 155 ನೀಡುವಂತೆ ಹೈಕೋರ್ಟ್ ಇಲಾಖೆಗೆ ಆದೇಶಿಸಿತ್ತು. ಆದರೆ, ವಿಶೇಷ ಭೂಸ್ವಾಧೀನ ಇಲಾಖೆ ಅಧಿಕಾರಿಗಳು ಪರಿಹಾರ ಪಾವತಿಸಿರಲಿಲ್ಲ. ಹೀಗಾಗಿ ಬುಧವಾರ ಕಚೇರಿಯಲ್ಲಿದ್ದ ಪೀಠೋಪಕರಣಗಳ ಜಪ್ತಿ ಮಾಡಲಾಯಿತು.
ಇದು ಎರಡನೇ ಬಾರಿಗೆ ಜಪ್ತಿ ವಾರೆಂಟ್ ಜಾರಿ ಆಗಿದ್ದು, ಇನ್ನೂ ₹12 ಲಕ್ಷ ಬಾಕಿ ಪರಿಹಾರ ನೀಡಬೇಕಾಗಿದೆ.