ರಬಕವಿ ಬನಹಟ್ಟಿ (ಬಾಗಲಕೋಟೆ) : ಐದಾರು ದಿನಗಳಿಂದ ರಬಕವಿ ಬನಹಟ್ಟಿ ಸುತ್ತಮುತ್ತ ಸತತವಾಗಿ ಮಳೆ ಸುರಿಯುತ್ತಿದ್ದು, ಇಲ್ಲಿನ ಕೆರೆ ತುಂಬಿದೆ. ಇದಲ್ಲದೆ, ವಿವಿಧ ಕಡೆಗಳಲ್ಲಿ ನಿರ್ಮಿಸಲಾದ ಬಾಂದಾರಗಳು ಮೈತುಂಬಿಕೊಂಡಿದ್ದು, ಮೇಲಿನಿಂದ ಬೀಳುತ್ತಿರುವ ನೀರು ನೋಡುಗರನ್ನು ಆಕರ್ಷಿಸುತ್ತಿದೆ.
ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ತೋಟದ ರಸ್ತೆಯು ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಈ ಭಾಗದಲ್ಲಿರುವ ಕಾಲುವೆಗಳಿಗೆ ಮರುಜೀವ ಬಂದಿದೆ. ಆದರೆ, ಕೆರೆಯಿಂದ ಹೆಚ್ಚಾದ ನೀರು ಹೊರಗೆ ಬರುತ್ತಿರುವುದರಿಂದ ಜಗದಾಳ ಮತ್ತು ಚಿಮ್ಮಡ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ.
ಬಹಳ ದಿನಗಳ ನಂತರ ಬನಹಟ್ಟಿಯ ಕೆರೆ ತುಂಬಿದ್ದರಿಂದ ತೋಟದ ರಸ್ತೆಯ ಕಾಲುವೆಗಳು ತುಂಬಿ ಹರಿಯುತ್ತಿವೆ. ‘ಉತ್ತಮವಾದ ಮಳೆಯಿಂದಾಗಿ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ’ ಎಂದು ರೈತರಾದ ಶಿವು ಗುಂಡಿ, ಸಿದ್ದು ಗೌಡಪ್ಪನವರ, ಅಪ್ಪು ಪಾಟೀಲ, ಸದಾಶಿವ ಬಂಗಿ ತಿಳಿಸಿದರು.