ಉಜಿರೆ: ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ 1968ರ ಅ. 24ರಂದು ಸಂಪ್ರದಾಯದಂತೆ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಿಕ್ತರಾದ ಡಿ. ವೀರೇಂದ್ರ ಹೆಗ್ಗಡೆ ಅವರು 50 ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು, ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ವರ್ಧಂತ್ಯುತ್ಸವವು ಇದೇ 24ರಂದು ನಡೆಯಲಿದೆ.
ಧರ್ಮಸ್ಥಳದ ಸಿಬ್ಬಂದಿ, ಊರಿನ ನಾಗರಿಕರು ಹಾಗೂ ಭಕ್ತಾಭಿಮಾನಿಗಳು ಸರಳ ರೀತಿಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ. ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
24ರಂದು ಸಂಜೆ 5.30ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮತ್ತು ಶಾಸಕ ಕೆ.ವಸಂತ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಹಿತಿ ಡಾ. ಗುರುರಾಜ ಕರ್ಜಗಿ ಅಭಿನಂದನಾ ಭಾಷಣ ಮಾಡುವರು.
ಪರಿಚಯ: 1948 ನವೆಂಬರ್ 25ರಂದು ಅಂದಿನ ಧರ್ಮಾಧಿಕಾರಿಯಾಗಿದ್ದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ಜನಿಸಿದ ವೀರೇಂದ್ರ ಕುಮಾರ್ ಬೆಂಗಳೂರು ವಿ.ವಿ.ಯಿಂದ ಬಿ.ಎ ಪದವಿ ಪಡೆದಿದ್ದಾರೆ.
1968ರ ಅಕ್ಟೋಬರ್ 24ರಂದು ನೆಲ್ಯಾಡಿ ಬೀಡಿನಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿ ವೀರೇಂದ್ರ ಹೆಗ್ಗಡೆ ಆದರು. ಕಳೆದ 20 ಮಂದಿ ಧರ್ಮಾಧಿಕಾರಿಗಳಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಮತ್ತು ಅನೇಕ ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ಇವರಿಗಿದೆ. ಹೆಗ್ಗಡೆ ಅವರಿಗೆ ಪದ್ಮವಿಭೂಷಣ ಪುರಸ್ಕಾರ ದೊರಕಿರುವುದು ಧರ್ಮಸ್ಥಳದ ಇತಿಹಾಸದಲ್ಲೇ ಮೊದಲನೆಯದಾಗಿದೆ.