ಬೆಂಗಳೂರು: ‘ಕನ್ನಡ ನಾಡು, ನುಡಿ, ಜಲಕ್ಕಾಗಿ ಹೋರಾಟ ನಡೆಸಿದ ಕನ್ನಡಪರ ಹೋರಾಟಗಾರರ ಮೇಲಿರುವ ಎಲ್ಲ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಘೋಷಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡಿಗರ ಸಮಾವೇಶ ಮತ್ತು ಜನಪದ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡಕ್ಕಾಗಿ ಹೋರಾಡುವಾಗ ಪೊಲೀಸರ ಲಾಠಿ ಏಟು, ಜೈಲು ಶಿಕ್ಷೆ, ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ. ಇವೆಲ್ಲದರ ನಡುವೆಯೂ ಕರ್ನಾಟಕ ರಕ್ಷಣಾ ವೇದಿಕೆ ಎದೆಗುಂದದೆ ಹೋರಾಡುತ್ತಿರುವುದು ಶ್ಲಾಘನೀಯ’ ಎಂದರು.
‘ಕನ್ನಡಕ್ಕೆ ಪ್ರತ್ಯೇಕ ಬಾವುಟ ಹೊಂದಲೇಬೇಕು. ಇದು ರಾಜ್ಯದ ಆರೂವರೆ ಕೋಟಿ ಜನರ ಒತ್ತಾಸೆಯಾಗಿದೆ’ ಎಂದು ಪುನರುಚ್ಚರಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ‘ಸಂಸತ್ ಅಧಿವೇಶನದ ವೇಳೆ ರಾಜ್ಯದಿಂದ ಸಾಹಿತಿಗಳು, ಕನ್ನಡಪರ ಹೋರಾಟಗಾರರು ದೆಹಲಿಗೆ ನಿಯೋಗ ಬಂದರೆ ಪ್ರಧಾನಿಯ ಗಮನ ಸೆಳೆದು, ನಮ್ಮ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲು ಸಾಧ್ಯವಾಗಲಿದೆ’ ಎಂದರು.
*
ಗಡಿ ವಿಚಾರ, ಶಾಸ್ತ್ರೀಯ ಭಾಷೆ, ಕಾವೇರಿ, ಕೃಷ್ಣಾ, ಮಹದಾಯಿ ಜಲ ವಿವಾದಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ. ನ್ಯಾಯ ಪಡೆಯಲು ರಾಜ್ಯ ಸರ್ಕಾರ ಎಲ್ಲ ರೀತಿಯ ಹೋರಾಟ ನಡೆಸಲಿದೆ. -ಸಿದ್ದರಾಮಯ್ಯ, ಮುಖ್ಯಮಂತ್ರಿ