ಮೈಸೂರು: ಮಧ್ಯಾಹ್ನದ ಬಿಸಿಯೂಟ, ಅಕ್ಷರ ದಾಸೋಹ ಸೇರಿದಂತೆ ವಿವಿಧ ಯೋಜನೆಗಳಿಗೆ ವಿತರಣೆಯಾಗದೆ ಆಹಾರ ಇಲಾಖೆಯ ಗೋದಾಮುಗಳಲ್ಲಿ ದಾಸ್ತಾನು ಮಾಡಿದ್ದ ನೂರಾರು ಕ್ವಿಂಟಲ್ ಗೋಧಿ ಹುಳುಬಿದ್ದು ಸಂಪೂರ್ಣ ಹಾಳಾಗಿದೆ.
ಗ್ರಾಮಾಂತರ ಹಾಗೂ ನಗರ ಗೋದಾಮಿನಲ್ಲಿ ಕ್ರಮವಾಗಿ 429 ಮತ್ತು 316 ಕ್ವಿಂಟಲ್ ಗೋಧಿಗೆ ಹುಳುಬಿದ್ದಿದೆ. ಇಷ್ಟು ಗೋಧಿ ಬಳಕೆ ಸಾಧ್ಯವಿಲ್ಲವಾಗಿದೆ.
ವರ್ಷದಿಂದ ಗೋಧಿ ವಿತರಣೆಯಾಗಿಲ್ಲ. ಈ ಗೋದಾಮುಗಳಿಂದ ಗೋಧಿ ಸರಬರಾಜು ಮಾಡುವಂತೆ ಕೋರಿಕೆ ಬಂದಿಲ್ಲದ ಕಾರಣ ಇಟ್ಟಲ್ಲೇ ಹಾಳಾಗಿದೆ. ಸಂರಕ್ಷಣೆಯ ಕ್ರಮಗಳನ್ನೂ ತೆಗೆದುಕೊಳ್ಳದೆ ಹುಳುಬಿದ್ದಿದೆ.
ಸ್ಥಳೀಯರು ನೀಡಿದ ದೂರಿನ ಮೇಲೆ ಬಿಜೆಪಿ ಮುಖಂಡರು ಸೋಮವಾರ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಹಾಳಾಗಿರುವುದು ಬೆಳಕಿಗೆ ಬಂದಿದೆ.
‘ಪಡಿತರ ವಿತರಣೆಯಾಗದೆ ಉಳಿಕೆಯಾದ ಗೋಧಿಗೆ ಹುಳುಬಿದ್ದಿದೆ. ದೀರ್ಘಕಾಲ ಶೇಖರಿಸಿಟ್ಟರೆ ಹುಳು ಬೀಳುತ್ತದೆ. ನಮಗೆ ಒಂದು ವರ್ಷದಿಂದ ಹೊಸ ಗೋಧಿ ಬಂದಿಲ್ಲ. ಉಳಿಕೆ ಗೋಧಿಯಷ್ಟೇ ಹಾಳಾಗಿದೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.