ಧಾರವಾಡ: ಇಲ್ಲಿನ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ನೀಲಕಂಠಪ್ಪ ಅಸೂಟಿ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಒಕ್ಕೂಟಕ್ಕೆ 2014ರ ಮೇನಲ್ಲಿ ಅಸೂಟಿ ಆಯ್ಕೆಗೊಂಡಿದ್ದರು.
ಪಕ್ಷದ ಆಂತರಿಕ ಒಪ್ಪಂದದಂತೆ ಎರಡೂವರೆ ವರ್ಷಗಳ ನಂತರ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಕುರಿತು ಮಾತುಕತೆ ನಡೆದಿತ್ತು. ಆದರೆ, ಒಪ್ಪಂದದ ಅವಧಿ ಮುಗಿದ ಮೇಲೂ ಒಂದು ವರ್ಷ ಹೆಚ್ಚುವರಿಯಾಗಿ ಅಸೂಟಿ ಮುಂದುವರಿದಿದ್ದರು ಎಂದು ಮೂಲಗಳು ತಿಳಿಸಿವೆ.
‘ಹಾಲು ಉತ್ಪಾಧನಾ ಘಟಕದಲ್ಲಿ ಹಾಲಿನ ಪುಡಿ ನಿರ್ಮಾಣ ಘಟಕ ಸ್ಥಾಪನೆ ಪೂರ್ಣಗೊಳಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಕುರಿತು ಅಸೂಟಿ ಅವರು ತಮ್ಮ ಆಪ್ತರೊಂದಿಗೆ ವಿಷಯ ಹಂಚಿಕೊಂಡಿದ್ದರು.
ಕಳೆದ ವರ್ಷ ಈ ಘಟಕದ ಶಂಕುಸ್ಥಾಪನೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟಕ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಕೆಎಂಎಫ್ನ ನಿಧಿಯಿಂದಲೇ ಘಟಕದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಿಂದಲೂ ಅವರು ಬೇಸರಗೊಂಡಿದ್ದರು’ ಎಂದು ಅಸೂಟಿ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಒಪ್ಪಂದದಂತೆ ಅಧ್ಯಕ್ಷ ಸ್ಥಾನ ತೆರವುಗೊಳಿಸುವಂತೆ ಒತ್ತಡ ಹೆಚ್ಚಾದ ಕಾರಣ ಸೋಮವಾರ ಹಾಲು ಒಕ್ಕೂಟದ ಅಧಿಕಾರಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಪತ್ರದಲ್ಲಿ ರಾಜೀನಾಮೆಗೆ ವೈಯಕ್ತಿಕ ಕಾರಣ ಎಂದು ನಮೂದಿಸಿದ್ದಾರೆ. ಆದರೆ, ನಿರ್ವಾಹಕ ನಿರ್ದೇಶಕರು ಇಲ್ಲದ ಕಾರಣ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
‘ಈ ನಡುವೆ ತೆರವಾಗಲಿರುವ ಸ್ಥಾನಕ್ಕೆ ಗಂಗಪ್ಪ ಮೊರಬದ ಹಾಗೂ ಎಚ್.ಜಿ.ಹಿರೇಗೌಡರ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹುಬ್ಬಳ್ಳಿಕುಂದಗೋಳ ತಾಲ್ಲೂಕಿನ ಗಂಗಪ್ಪ ಮೊರಬದ ಹಾಗೂ ಗದಗ–ನರಗುಂದ ಕ್ಷೇತ್ರದಿಂದ ಹನುಮಂತಗೌಡ ಹಿರೇಗೌಡರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಈ ಇಬ್ಬರೂ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯೆಗಾಗಿ ನೀಲಕಂಠಪ್ಪ ಅಸೂಟಿ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.