ಪಿರಿಯಾಪಟ್ಟಣ: ಕಾಡಾನೆ ಹಿಂಡಿನಿಂದ ಬೇರ್ಪಟ್ಟಿದ್ದ ಒಂದು ವರ್ಷದ ಮರಿಯಾನೆಯನ್ನು ಹುಡುಕಿ ಮತ್ತೆ ತಾಯಿಯ ಬಳಿ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ದೊಡ್ಡ ಹರವೆ ಅರಣ್ಯ ಪ್ರದೇಶದ ದೊಡ್ಡ ಕೆರೆ ಬಳಿಯ ಸಿಪಿಟಿ 1ರಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಹಿಂಡಿನಿಂದ ಮಂಗಳವಾರ ಆನೆ ಮರಿ ಬೇರ್ಪಟಿತ್ತು.
ತಾಯಿ ಆನೆ, ಮರಿಯನ್ನು ಹುಡುಕುತ್ತಾ ಘೀಳಿಡುತ್ತಿದ್ದ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಾಮು ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಹುಡುಕಾಟ ನಡೆಸಿದರು.
ಕಾವೇರಿ ನದಿ ದಾಟಿ ಹೋಗಿದ್ದ ಮರಿ ಆನೆ, ದುಬಾರೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಬಳಿಕ ಅಲ್ಲಿನ ಅಧಿಕಾರಿಗಳ ನೆರವಿನೊಂದಿಗೆ ಬುಧವಾರ ಮರಿಯನ್ನು ಲಾರಿಯಲ್ಲಿ ಕರೆತರಲಾಯಿತು.
ವನ್ಯಜೀವಿ ವೈದ್ಯ ಡಾ.ಮುಜೀಬ್ ಮರಿಯನ್ನು ಪರೀಕ್ಷಿಸಿ ಆರೋಗ್ಯವಾಗಿರುವುದನ್ನು ಖಚಿತಪಡಿಸಿದ ನಂತರ ಬುಧವಾರ ತಾಯಿ ಆನೆಯೊಂದಿಗೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಆರ್ಎಫ್ಒ ಗಿರೀಶ್. ಡಿಆರ್ಎಫ್ಒಗಳಾದ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.