ಬೆಳಗಾವಿ: ಕವಿ ಡಾ.ದ.ರಾ.ಬೇಂದ್ರೆ ಸ್ಮಾರಕ ಟ್ರಸ್ಟ್ ಮಾದರಿಯಲ್ಲಿ ರಂಗಭೂಮಿಯ ದಿಗ್ಗಜ ಏಣಗಿ ಬಾಳಪ್ಪ ಸ್ಮಾರಕ ಟ್ರಸ್ಟ್ ರಚಿಸಬೇಕೆಂದು ಜಿಲ್ಲೆಯ ಸಾಹಿತಿಗಳು, ಕಲಾವಿದರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಏಣಗಿ ಬಾಳಪ್ಪ ನಿಧನರಾಗಿ ಎರಡು ತಿಂಗಳು ಕಳೆದಿವೆ. ಇನ್ನೂ ಟ್ರಸ್ಟ್ ಸ್ಥಾಪನೆ ಸಂಬಂಧ ನಿರ್ಧರಿಸಿಲ್ಲ. ಹೀಗಾಗಿ ನಗರದಲ್ಲಿ ಇತ್ತೀಚೆಗೆ ಸಭೆ ಸೇರಿದ ಪ್ರಮುಖ ಸಾಹಿತಿಗಳು, ಕಲಾವಿದರು ಟ್ರಸ್ಟ್ ನಿರ್ಮಿಸುವಂತೆ ಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಕೋರಲು ತೀರ್ಮಾನಿಸಿದರು.
ಬಾಳಪ್ಪ ಅವರ ಹುಟ್ಟೂರು, ಸವದತ್ತಿ ತಾಲ್ಲೂಕಿನ ಏಣಗಿಯಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸಬೇಕು. ರಂಗಮಂದಿರ ನಿರ್ಮಾಣ ಮಾಡಬೇಕು, ಟಿಳಕವಾಡಿಯ ಕಲಾಮಂದಿರಕ್ಕೆ ‘ಏಣಗಿ ಬಾಳಪ್ಪ ಕಲಾಮಂದಿರ’ ಎಂದು ನಾಮಕರಣ ಮಾಡಬೇಕು. ಇದಲ್ಲದೇ, ನಗರದ ವೃತ್ತವೊಂದಕ್ಕೆ ಅವರ ಹೆಸರು ಇಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಲೇಖಕ ಬಿ.ಎಸ್. ಗವಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.