ಜನವಾಡ: ಕಾರಂಜಾ ನದಿ ತುಂಬಿ ಹರಿಯುತ್ತಿರುವ ಕಾರಣ ಬೀದರ್ ತಾಲ್ಲೂಕಿನ ಬಗದಲ್ ಬಳಿಯ ಹಳೆಯ ಸೇತುವೆ ನೀರಿನಲ್ಲಿ ಮುಳುಗಿದ್ದು, ನದಿ ದಂಡೆಯಲ್ಲಿ ಇರುವ ಗ್ರಾಮಗಳ ರೈತರ ಹೊಲಗಳಿಗೆ ನೀರು ನುಗ್ಗಿದೆ.
ತೆಲಂಗಾಣ ಪ್ರದೇಶದಲ್ಲಿ ವಾರದಿಂದ ಮಳೆಯಾಗುತ್ತಿರುವುದರಿಂದ ಬಗದಲ್ ಹತ್ತಿರದ ಸೇತುವೆಯಿಂದ ಮರಕುಂದಾ ಕಡೆಗಿನ ನದಿ ಭಾಗದಲ್ಲಿ ನೀರು ತುಂಬಿದೆ.
‘ಬಗದಲ್, ಬಾಪುರ, ಮೊಗದಾಳ, ರೇಕುಳಗಿ, ರಂಜೋಳಖೇಣಿ, ಹುಚಕನಳ್ಳಿ ಪ್ರದೇಶಗಳ ರೈತರ ಹೊಲಗಳಿಗೆ ಕಾರಂಜಾ ಅಣೆಕಟ್ಟೆಯ ಹಿನ್ನೀರು ನುಗ್ಗಿದೆ’ ಎಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ಬಾಬುರಾವ್ ಹೊನ್ನಾ ತಿಳಿಸಿದ್ದಾರೆ.
‘ಅನೇಕ ರೈತರ ಹೊಲಗಳಲ್ಲಿ ನೀರು ನಿಂತುಕೊಂಡ ಕಾರಣ ಹಿಂಗಾರು ಬಿತ್ತನೆಯೇ ಆಗಿಲ್ಲ. ರೈತರಿಗೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.